ಬೆಂಗಳೂರು: ಇಸ್ಕಾನ್ ದೇವಾಲಯದ ಅರ್ಚಕರ ಕೈ-ಕಾಲು ಕಟ್ಟಿಹಾಕಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಕೆ.ಆರ್ ಪುರಂನ ಬೆತ್ತಲ್ ನಗರದಲ್ಲಿ ನಡೆದಿದೆ.
ಸಂಜಯ್ ಸತೀಶ್ ಕೊಲೆಯಾದ ಅರ್ಚಕ ಎಂದು ಗುರುತಿಸಲಾಗಿದೆ.
ಇಸ್ಕಾನ್ ದೇವಾಲಯದಲ್ಲಿ ಅರ್ಚಕರಾಗಿದ್ದ ಸಂಜಯ್ ಅವರು ನಗರದ ಅಪಾರ್ಟ್ ಮೆಂಟ್ನಲ್ಲಿ ವಾಸವಾಗಿದ್ದರು. ಕಳೆದ ಬುಧವಾರದಂದು ಇಸ್ಕಾನ್ನಲ್ಲಿ ಪೂಜೆ ಮುಗಿಸಿಕೊಂಡು ಅಪಾರ್ಟ್ ಮೆಂಟ್ಗೆ ಬಂದಿದ್ದಾರೆ. ಈ ವೇಳೆಯಲ್ಲಿ ಅಪಾರ್ಟ್ ಮೆಂಟ್ಗೆ ಬಂದಿರೋ ಕೆಲವು ದುಷ್ಕರ್ಮಿಗಳು ಸಂಜಯ್ ಕೈ-ಕಾಲು ಕಟ್ಟಿ ಕೊಲೆ ಮಾಡಿದ್ದಾರೆ. ಬುಧವಾರ ರಾತ್ರಿ ಸಂಜಯ್ ಫ್ಲಾಟ್ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಕೆ.ಆರ್ ಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆಗೆದು ನೋಡಿದಾಗ ಸಂಜಯ್ ಕೊಲೆಯಾದ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

