hdk-web-1

ಬೆಂಗಳೂರು: ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನ್ಸೂರ್ ಅವರಿಗೆ ಎರಡು ಬಾರಿ ಬ್ಯಾಲೆಟ್ ಪೇಪರ್ ನೀಡಿದ ಅಧಿಕಾರಿಗಳ ಕ್ರಮ ವಿರೋಧಿಸಿ ಜೆಡಿಎಸ್ ಮತದಾನ ಬಹಿಷ್ಕರಿಸಲು ನಿರ್ಧರಿಸಿದೆ.

ಈ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಂದು ಬೆಳಿಗ್ಗೆ ಮತದಾನದ ವೇಳೆ ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನ್ಸೂರ್ ತಪ್ಪಾಗಿ ಕಾಂಗ್ರೆಸ್ ಅಭ್ಯರ್ಥಿಯಲ್ಲದವರಿಗೆ ಮತ ಹಾಕಿದ್ದರು. ಇದನ್ನು ನೋಡಿದ ಪಕ್ಷದ ಏಜೆಂಟ್ ಇಬ್ಬರ ಗಮನಕ್ಕೂ ತಂದಿದ್ದರು. ನಂತರ ಇಬ್ಬರೂ ಮತ್ತೊಮ್ಮೆ ಮತದಾನ ಮಾಡಿದ್ದರು.

ಇವರಿಗೆ ಚುನಾವಣಾಧಿಕಾರಿ ಎಸ್. ಮೂರ್ತಿ ಹೊಸ ಬ್ಯಾಲೆಟ್ ಪೇಪರ್ ಗಳನ್ನು ನೀಡಿದ್ದರು. ಇದಕ್ಕೆ ಸ್ಥಳದಲ್ಲಿದ್ದ ಜೆಡಿಎಸ್ ನಾಯಕರಾದ ರಮೇಶ್ ಬಾಬು ಮತ್ತು ಎಚ್.ಡಿ.ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಧಿಕಾರಿಗಳು ಏಜೆಂಟ್ ಗಳ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಇದಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಇಬ್ಬರೂ ಸಚಿವರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಿದ್ದರು. ಇವರಿಗೆ ಚುನಾವಣಾಧಿಕಾರಿಗಳು ಎರಡು ಬಾರಿ ಬ್ಯಾಲೆಟ್ ನೀಡಿದ್ದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಜೊತೆಗೆ ಈ ಬಗ್ಗೆ ಕುಮಾರಸ್ವಾಮಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ನಂತರ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ನಿಂದ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಸಭಾ ಚುನಾವಣೆಯನ್ನು ಬಹಿಷ್ಕರಿಸಿದೆ. ಇನ್ನು ಎರಡು ಬಾರಿ ಮತಪತ್ರ ನೀಡಿದ ಸಂಬಂಧ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಗೆ ಜೆಡಿಎಸ್ ದೂರನ್ನೂ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲುವ ಹತಾಷೆಯಲ್ಲಿ ಜೆಡಿಎಸ್ ಹೀಗೆ ವರ್ತಿಸುತ್ತಿದೆ ಎಂದಿದ್ದಾರೆ.

 

By suddi9

Leave a Reply

Your email address will not be published. Required fields are marked *