vlcsnap-error172

ಮಂಗಳೂರು: ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ್ ಅವರು ಕರಾವಳಿಯಲ್ಲಿ ಚುನಾವಣಾ ಪೂರ್ವ ನಡೆಸಿದ ಪ್ರಚಾರದ ಬೆನ್ನಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ಪ್ರವಾಸವನ್ನು ಇಂದು ನಡೆಸಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಮಂಗಳೂರಿಗೆ ಬರುತ್ತಿರುವ ರಾಹುಲ್ ಗಾಂಧಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸುತ್ತಿದ್ದು ಮಂಗಳೂರು ನಗರದಲ್ಲಿ ಬಂಟಿಂಗ್ಸ್ , ಪ್ಲೆಕ್ಸ್ ಗಳು ರಾರಾಜಿಸುತ್ತಿದೆ.

ಇನ್ನು ರಾಗಾ ಪ್ರಚಾರಕ್ಕೆ ಇಂದು ಪ್ರಚಾರ ವಾಹನವನ್ನು ಸಿದ್ದಪಡಿಸಲಾಗಿದ್ದು ರಮಾನಾಥ ರೈ ಈ ವಾಹನಕ್ಕೆ ಚಾಲನೆ ನೀಡಿದರು. ಇಂದು ಉಡುಪಿ ಮತ್ತು ಮಂಗಳೂರಿಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಉಡುಪಿಯಲ್ಲಿ ಭಾಗವಹಿಸಿ ಮಧ್ಯಾಹ್ನ 3.30 ಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲಿದ್ದಾರೆ. ಮುಲ್ಕಿಯಲ್ಲಿ ಅವರನ್ನು ಸ್ವಾಗತಿಸಲಾಗುತ್ತದೆ.

ಸುರತ್ಕಲ್ ನಲ್ಲಿ ರೋಡ್ ಶೋ ಮೂಲಕ ಮಂಗಳೂರಿನ ಜ್ಯೋತಿಗೆ ಬರಲಿದ್ದಾರೆ. ಜ್ಯೋತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಅವರು ಮಂಗಳೂರಿನ ನೆಹರು ಮೈದಾನದವರೆಗೆ ಬರಲಿದ್ದು ನೆಹರು ಮೈದಾನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆ ನಂತರ ಸರ್ವ ಧರ್ಮ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನ ರೊಸಾರಿಯೋ ಚರ್ಚ್, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಮತ್ತು ಉಳ್ಳಾಲ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಮಂಗಳೂರಿನ ಸರ್ಕ್ಯುಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ   ಬೆಳಿಗ್ಗೆ ಕಾಂಗ್ರೆಸ್ ನ ಹಿರಿಯ ಮುಖಂಡರು ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರುಗಳೊಂದಿಗೆ ಚರ್ಚಿಸಿ ಶೃಂಗೇರಿಗೆ ಪ್ರಯಾಣ ಬೆಳಸಲಿದ್ದಾರೆ. ರಾಹುಲ್ ಗಾಂಧಿ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಾರ್ಯಕರ್ತರು ಅತ್ಯುತ್ಸಾಹದಿಂದ ತಯಾರಿ ನಡೆಸುತ್ತಿದ್ದಾರೆ. ನಗರದಾದ್ಯಂತ ಬಂಟಿಂಗ್ಸ್ , ಪ್ಲೆಕ್ಸ್ ಗಳೆ ತುಂಬಿ ಹೋಗಿದ್ದು ರಾಹುಲ್ ಗಾಂಧಿಗೆ ಶುಭಕೋರುವ ಪ್ಲೆಕ್ಸ್ ಗಳು ನಗರದಾದ್ಯಂತ ರಾರಾಜಿಸುತ್ತಿದೆ.

ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಕ್ಕೆ ವೇದಿಕೆಗಳು ಸಿದ್ದವಾಗುತ್ತಿದೆ. ಇನ್ನು ರಾಹುಲ್ ಗಾಂಧಿ ಕಾರ್ಯಕ್ರಮದ ಪ್ರಚಾರ ನಡೆಸಲು ಪ್ರಚಾರ ವಾಹನ ಜಾಥಕ್ಕೆ ಇಂದು ಮಂಗಳೂರಿನಲ್ಲಿ ಸಚಿವ ರಮನಾಥ ರೈ ಚಾಲನೆಯನ್ನು ನೀಡಿದರು. ರಾಹುಲ್ ಗಾಂಧಿ ಪ್ರಚಾರದಿಂದ ಕರಾವಳಿಯಲ್ಲಿ ಆಗಿರುವ ಕೇಸರಿಮಯ ತೊಲಗುತ್ತದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಮುಖಂಡರು ಹೊಂದಿದ್ದಾರೆ.

ಕರಾವಳಿಯಲ್ಲಿ ಎರಡು ದಿನಗಳ ಕಾಲ ಇರುವ ರಾಹುಲ್ ಗಾಂಧಿ ಪ್ರವಾಸ ಜಿಲ್ಲೆಯ ಕಾಂಗ್ರೆಸಿನಲ್ಲಿ ಹೊಸ ಹುಮ್ಮಸ್ಸು ತುಂಬಿದೆ. ಕೇವಲ ಟೆಂಪಲ್ ರನ್ ಗೆ ಒತ್ತು ನೀಡದೆ ಸರ್ವಧರ್ಮದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ಜಿಲ್ಲೆಯ ಮತದಾರರ ಒಲವನ್ನು ಗಳಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಕರಾವಳಿಗೆ ಬರುತ್ತಿರುವುದರಿಂದ ಕಾಂಗ್ರೆಸ್ ಗೆ ಶಕ್ತಿ ತುಂಬಲಿದೆ ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸಿಗರು ಹೊಸ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

By suddi9

Leave a Reply

Your email address will not be published. Required fields are marked *