
ಪುತ್ತೂರು: ಶಾಸಕ ಮೊಯಿದ್ದೀನ್ ಬಾವಾ ಅವರ ಅಭಿವೃದ್ಧಿ ಬಗ್ಗೆ ಪ್ರಚಾರ ನಡೆಸಲು ಅಯ್ಯಪ್ಪ ಸ್ವಾಮಿ ಭಕ್ತಿಗೀತೆಯನ್ನು ವಿರೂಪಗೊಳಿಸಿ ತುಳು ಸಾಹಿತ್ಯ ರಚಿಸಿ ಹಿಂದೂಗಳನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯ್ಯಪ್ಪ ಸ್ವಾಮಿಯ ಕುರಿತ ಕಲ್ಲು ಮುಳ್ಳು ಶಬರಿಮಲೆಕ್ಕ್ ಎನ್ನುವ ಪ್ರಸಿದ್ಧ ಗೀತೆಯನ್ನು ಅನುಸರಿಸಿ ಮೊಯ್ದೀನ್ ಬಾವಾ ಹೆಸರಿನಲ್ಲಿ ಹಾಡೊಂದನ್ನು ರಚಿಸಲಾಗಿದೆ. ಈ ಹಾಡು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದರಲ್ಲಿ ಶಾಸಕರನ್ನು ಹೊಗಳಲಾಗಿದೆ. ಬಹು ಬೇಗ ಪ್ರಚಾರವಾಗಲಿ ಎನ್ನುವ ಉದ್ದೇಶದೊಡನೆ ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ಶೈಲಿಯಲ್ಲಿ ಇದನ್ನು ಹಾಡಲಾಗಿದೆ. ಶಾಸಕರ ಕುರಿತ ಈ ಗೀತೆಗೆ ಹಿಂದೂಪರ ಸಂಘಟನೆಗಳಿಂದ ಬಾರೀ ಆಕ್ರೋಶ ವ್ಯಕ್ತವಾಗಿತ್ತು.
