ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯಿಂದ ಗ್ರಾಹಕರಿಗೆ ಬಹುಕೋಟಿ ಹಣ ವಂಚಿಸಿದ ಪ್ರಕರಣ ಸಂಬಂಧ ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ ಒಂದು ದಿನ ಮಟ್ಟಿಗೆ ನಿರ್ದೇಶಕ ಆನಂದ ಅಪ್ಪುಗೋಳಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಗರದ ನಿವಾಸಿ ನಾನಾ ದೊಂಡಿಬಾ ದೇಸಾಯಿ ಎಂಬುವವರು 1.42 ಕೋಟಿ ರೂ. ಠೇವಣಿ ಇಟ್ಟಿದ್ದರು. ಅವಧಿ ಮುಗಿದ ಬಳಿಕವೂ ಠೇವಣಿ ಹಣ ಹಿಂದರುಗಿಸದ ಹಿನ್ನಲೆ ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರಿಗೆ ನಾನಾ ದೇಸಾಯಿ ದೂರು ಸಲ್ಲಿಸಿದ್ದರು .
ಕಳೆದ ರಾತ್ರಿ ಬಂಧನಕ್ಕೊಳಗಾಗಿದ್ದ ಆನಂದ ಅಪ್ಪುಗೋಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ ಒಂದು ದಿನದ ಮಟ್ಟಿಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.
ಬಹುಕೋಟಿ ಠೇವಣಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ತಲೆಮರೆಸಿಕೊಂಡು ಮುಂಬೈನ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿದ ಸಿಸಿಬಿ ಪೊಲೀಸರು ಆನಂದ ಅಪ್ಪುಗೋಳ ಅವರನ್ನು ಬಂಧಿಸಿ, ನಗರಕ್ಕೆ ಕರೆತಂದಿದ್ದರು.
ಮೂರು ತಿಂಗಳ ಹಿಂದೆ ಜಿಲ್ಲಾ ನ್ಯಾಯಾಲಯದಲ್ಲಿ ಆನಂದ ಅಪ್ಪುಗೋಳ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ, ಒಂದು ತಿಂಗಳ ಕಾಲ ಆನಂದ ಅಪ್ಪುಗೋಳ ಹಿಂಡಲಗಾ ಜೈಲಿನಲ್ಲಿದ್ದರು. ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಹೊರ ಬಂದು, ತನಿಖೆಗೆ ಹಾಜರಾಗುತ್ತಿದ್ದರು.

