ಕಾಂಗ್ರೆಸ್ ದಮನಕ್ಕೆ ಸಿದ್ಧರಾಮಯ್ಯ ಸಾಕು: ಸಂಸದ ನಳಿನ್ ಲೇವಡಿ
ಬಂಟ್ವಾಳ:ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ‘ಕಮಲ ಪತಾಕೆ’ ಹಾರಿಸುವ ಮೂಲಕ ಕಾಂಗ್ರೆಸ್ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ದೇಶಪ್ರೇಮಿ ಸಂಘಟನೆ ಆರ್ಎಸ್ಎಸ್ ಮತ್ತಿತರ ಸಂಘ ಪರಿವಾರ ಹಾಗೂ ಬಿಜೆಪಿ ‘ಭಯೋತ್ಪಾದಕರು’ ಎನ್ನುವ ಮೂಲಕ ರಾಜ್ಯದಲ್ಲಿ ‘ಟಿಪ್ಪು ಜಯಂತಿ’ ಮೂಲಕ ಹಿಂದೂ-ಮುಸ್ಲಿಮರನ್ನು ಬೇರ್ಪಡಿಸಿ ಕಾಂಗ್ರೆಸ್ ಮುಕ್ತಗೊಳಿಸಲು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಬ್ಬರೇ ಸಾಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಲೇವಡಿ ಮಾಡಿದ್ದಾರೆ.
ತಾಲ್ಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಬಳಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ನೇತೃತ್ವದಲ್ಲಿ ಭಾನುವಾರ ಸಂಜೆ ಆರಂಭಗೊಂಡ ‘ಬಂಟ್ವಾಳ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಎಂಬ ವಿನೂತನ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕೇಂದ್ರ ಸರ್ಕಾರ ನೀಡಿದ ಅನುದಾನಕ್ಕೆ ತೆಂಗಿನ ಕಾಯಿ ಒಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ಮಾಫಿಯಾ ಮತ್ತು ಗೂಂಡಾಗಿರಿ ಯುವ ಕಾಂಗ್ರೆಸ್ಸಿಗರಲ್ಲಿದೆ. ಇಂತಹವರಿಂದ ಜನತೆಗೆ ರಕ್ಷಣೆ ನಿರೀಕ್ಷಿಸಲು ಹೇಗೆ ಸಾಧ್ಯ…? ಎಂದು ಪ್ರಶ್ನಿಸಿದರು.

ರೂ 2000 ಕೋಟಿ ಅನುದಾನ:
ಬಿ.ಸಿ.ರೋಡ್-ಅಡ್ಡಹೊಳೆ, ಕಾಂಕ್ರಿಟೀಕರಣ, ಬಿ.ಸಿ.ರೋಡ್-ಸುರತ್ಕಲ್ ಚತುಷ್ಪತ ರಸ್ತೆ, ಪೊಳಲಿ-ಕಟೀಲು, ಮೆಲ್ಕಾರ್-ಕೊಣಾಜೆ, ಸೇರಿದಂತೆ ಬಿ.ಸಿ.ರೋಡ್-ಸಿದ್ಧಕಟ್ಟೆ-ಕಾರ್ಕಳ ರಸ್ತೆ ವಿಸ್ತ್ತರಣೆ ಕಾಮಗಾರಿಗೆ ಕೇಂದ್ರ ಸರ್ಕಾರ ಅನುದಾನ ಒದಗಿಸಿದೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ರೂ.121ಕೋಟಿ ಮೊತ್ತ ಸೇರಿದಂತೆ ಒಟ್ಟು ರೂ 2000 ಕೋಟಿ ಮೊತ್ತದ ಅನುದಾನ ಕೇಂದ್ರ ಸರ್ಕಾರದಿಂದ ಬಂದಿದೆ. ಈ ಹಿಂದಿನ ಬಿಜೆಪಿ ಆಡಳಿತಾವಧಿಯ ಬಿಜೆಪಿ ಶಾಸಕರು ಮತ್ತು ಸಚಿವರು ನಡೆಸಿದ ಅಭಿವೃದ್ಧಿ ಮತ್ತು ಕಳೆದ 35 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಸಚಿವ ಬಿ.ರಮಾನಾಥ ರೈ ಅವರು ವಿನಿಯೋಗಿಸಿದ ಅನುದಾನಗಳ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ ಎಂದು ಅವರು ಸವಾಲು ಹಾಕಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಕಾಂಗ್ರೆಸ್ ಮುಕ್ತ ಬಂಟ್ವಾಳ ನಿರ್ಮಿಸಬೇಕು ಎಂದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಮರ ಮತ್ತು ಮರಳು ದಂಧೆ ನಡೆಸುತ್ತಿರುವ ಕಾಂಗ್ರೆಸ್ ಸುಮಾರು 4 ಸಾವಿರ ಮಂದಿ ನಕಲಿ ಮತದಾರರನ್ನು ಹೊಂದಿದೆ ಎಂದು ಆರೋಪಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ ಮಾತನಾಡಿ, ಮುಖ್ಯಮಂತ್ರಿಗೆ ತಾಕತ್ತಿದ್ದರೆ ಆರ್ಎಸ್ಎಸ್ ಮತ್ತಿತರ ಸಂಘ ಪರಿವಾರ ನಿಷೇಧಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಸಚಿವ ಬಿ.ರಮಾನಾಥ ರೈ ಸೋತರೆ ಮಾತ್ರ ಜಿಲ್ಲೆಯಲ್ಲಿ ಶಾಶ್ವತ ಸಾಮರಸ್ಯ ನೆಲೆಸಲಿದೆ ಎಂದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಕಮಲಾಕ್ಷಿ ಪೂಜಾರಿ, ಸುಗುಣ ಕಿಣಿ, ಜಿ.ಆನಂದ, ಉಮಾನಾಥ ಕೋಟ್ಯಾನ್, ಜಿತೇಂದ್ರ ಎಸ್.ಕೊಟ್ಟಾರಿ, ಬ್ರಿಜೇಶ್ ಚೌಟ, ರವೀಂದ್ರ ಕಂಬಳಿ, ಎಂ.ತುಂಗಪ್ಪ ಬಂಗೇರ, ರಾಮದಾಸ್ ಬಂಟ್ವಾಳ್, ಮೋನಪ್ಪ ದೇವಸ್ಯ, ರತ್ನಕುಮಾರ್ ಚೌಟ, ಸೀತಾರಾಮ ಪೂಜಾರಿ, ಬಿ.ದಿನೇಶ ಭಂಡಾರಿ, ದೇವಪ್ಪ ಪೂಜಾರಿ, ರಮಾನಾಥ ರಾಯಿ, ನಾಗೇಶ ಮಾಣಾಯಿ ಮತ್ತಿತರರು ಇದ್ದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯ ಡೊಂಬಯ ಬಿ.ಅರಳ ವಂದಿಸಿ, ಕರ್ಯಕ್ರಮ ನಿರೂಪಿಸಿದರು.

