ಸುದ್ದಿ9ಬಂಟ್ವಾಳ: ಹೊಂಡಗಳಿಂದ ತುಂಬಿ ಹೋಗಿದ್ದ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿಯಿಂದ ಕರ್ತಲಬೆಟ್ಟು ಸಂಪರ್ಕಿಸುವ ರಸ್ತೆಯನ್ನು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ನೇತೃತ್ವಲ್ಲಿ ಗ್ರಾಮಸ್ಥರೇ ಪ್ರತಿಭಟನಾರ್ಥವಾಗಿ ಶ್ರಮದಾನ ನಡೆಸಿ ಗಮನ ಸೆಳೆದಿದ್ದಾರೆ.
ಸುಮಾರು 8 ಕಿ.ಮೀ ಉದ್ದದ ಜಿ.ಪಂ.ರಸ್ತೆಯಲ್ಲಿ ವಾಹನ ಸಂಚಾರವೇ ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಹೊಂಡಗುಂಡಿಗಳು ತುಂಬಿ ಹೋಗಿತ್ತು. ದಿನನಿತ್ಯ ಹಲವಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಶಾಲಾ ಮಕ್ಕಳು ಸೇರಿದಂತೆ ನೂರಾರು ಮಂದಿ ಈ ರಸ್ತೆಯನ್ನು ನಿತ್ಯ ಬಳಕೆಗಾಗಿ ಅವಲಂಬಿಸಿದ್ದಾರೆ. ಆದರೆ ನಡೆದಾಡಲೂ ಅಯೋಗ್ಯವಾಗಿರುವ ರಸ್ತೆಯಿಂದಾಗಿ ಗ್ರಾಮಸ್ಥರು ತೊಂದರೆ ಪಡುವಂತಾಗಿತ್ತು. ಹದಗೆಟ್ಟ ರಸ್ತೆಯಲ್ಲಿ ಸಂಚಾರ ಸಾಧ್ಯವಾಗದೇ ಈ ಭಾಗದ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದವು. ಈ ಬಗ್ಗೆ ಸಂಬಂದಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಸಾಧ್ಯವಾಗಿರಲಿಲ್ಲ. ಕಳೆದ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿಯವರು ಪುಂಜಾಲಕಟ್ಟೆಗೆ ಆಗಮಿಸುತ್ತಿದ್ದಾರೆನ್ನುವ ಮಾಹಿತಿ ಪಡೆದ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಪುಂಜಾಲಕಟ್ಟೆಗೆ ಆಗಮಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಗೈರುಹಾಜರಾದ ಹಿನ್ನಲೆಯಲ್ಲಿ ಮನವಿ ಸಲ್ಲಿಸಲು ಬಂದಿದ್ದ ಗ್ರಾಮಸ್ಥರಿಗೂ ನಿರಾಸೆ ಉಂಟಾಗಿತ್ತು.
ಈ ಸಂದರ್ಭ ತಮ್ಮ ಗ್ರಾಮದ ಸಂಪರ್ಕ ರಸ್ತೆಯ ದುರಾವಸ್ಥೆಯನ್ನು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ಗಮನಕ್ಕೆ ತಂದಿದ್ದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿದ್ದರು. ಸಂಪರ್ಕ ರಸ್ತೆಯಿಲ್ಲದೆ ಆಕ್ರೋಶಗೊಂಡಿದ್ದ ಗ್ರಾಮಸ್ಥರನ್ನು ಸಮಧಾನಪಡಿಸಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗುವ ಬದಲು ಸ್ವತಃ ಶ್ರಮದಾನ ನಡೆಸಿ ರಸ್ತೆಯ ಸದ್ಯದ ಪರಿಸ್ಥಿಯನ್ನು ಸುಧಾರಿಸೋಣ, ಆ ಮೂಲಕ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಗೆ ಇಲ್ಲಿನ ದುಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡೋಣ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ರಸ್ತೆ ದುರಸ್ಥಿ ಮಾಡಬಹುದು ಎಂದು ಸಲಹೆ ನೀಡಿದ್ದರು. ಅದಕ್ಕೆ ಬೇಕಾದ ಸಹಕಾರವನ್ನು ನೀಡುವುದಾಗಿಯೂ ಘೋಷಿಸಿದ್ದರು. ಅದರಂತೆ ಗುರುವಾರ ಸಂಘಟಿತರಾದ ಗ್ರಾಮಸ್ಥರು ಕೆಂಪು ಕಲ್ಲು ತುಂಬಿ ರಸ್ತೆಯಲ್ಲಿದ್ದ ಹೊಂಡ ಮುಚ್ಚಿದರು. ರಾಜೇಶ್ ನಾಯಕ್ ಕೂಡ ಗ್ರಾಮಸ್ಥರ ಶ್ರಮದಾನಕ್ಕೆ ಸಾಥ್ ನೀಡಿದ್ದು, ದುರಸ್ಥಿ ಕಾರ್ಯಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಒದಗಿಸಿಕೊಟ್ಟರು. ಈ ಸಂದರ್ಭ ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್, ಪ್ರಮುಖರಾದ ಚರಣ್ ಜುಮಾದಿಗುಡ್ಡೆ, ಪವನ್ ಕುಮಾರ್, ಮತ್ತಿತರರು ಹಾಜರಿದ್ದರು.



