ಕೈಕಂಬ : ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಕೈಕಂಬದಲ್ಲಿ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಅಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶ್ರೀ ಹರ್ಷ (19) ಎಂದು ಗುರುತಿಸಲಾಗಿದೆ. ಮಿಜಾರಿನ ದೋಟ ಮನೆ ಮುರಳೀಧರ ತಂತ್ರಿಯವರ ಮಗನಾಗಿದ್ದು ಅಪರಾಹ್ನ 3.30ರ ಸುಮಾರಿಗೆ ಮನೆಯಿಂದ ಮಂಗಳೂರಿಗೆ ಹೊರಟಿದ್ದರು. ಕೈಕಂಬದ ಮಾರ್ಕೇಟ್ ಬಳಿಯ ದೇವಿಪ್ರಸಾದ್ ಹೋಟೇಲಿನ ಮುಂಭಾಗದಲ್ಲಿ ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ ಗಾಡಿ ಸ್ಕಿಡ್ ಆಗಿ ರಸ್ತೆಗೆ ಬಿದ್ದರು. ಆಗ ಇವರು ಓವರ್ಟೇಕ್ ಮಾಡಿದ ಲಾರಿ ಇವರ ಮೇಲಿಂದ ಹರಿದು ಹರ್ಷರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಜಪೆ ಪೂೀಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಇಲ್ಲಿ ರಸ್ತೆಯ ಡಾಮರು ಕಿತ್ತು ಹೋಗಿ ಗುಂಡಿಗಳಾಗಿದ್ದು ದ್ವಿಚಕ್ರ ವಾಹನ ಸವಾರರಿಗೆ ಮರಣಸದೃಶವಾಗಿ ಪರಿಣಮಿಸಿದೆ. ತಿಂಗಳ ಹಿಂದೆ ಇದೇ ರೀತಿಯಲ್ಲಿ ದ್ವಿಚಕ್ರ ವಾಹನ ಸವಾರರು ಇಲ್ಲಿ ಪ್ರಾಣ ಬಿಟ್ಟಿದ್ದರು. ಇಲ್ಲಿ ಇನ್ನಷ್ಟು ಅಪಘಾತವಾಗುವ ಮೊದಲು ರಸ್ತೆ ದುರಸ್ತಿಗೆ ಹೆದ್ದಾರಿ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
