ಸುದ್ದಿ9 ಕೈಕಂಬ: ಕೆಸರಿನ ಗದ್ದೆಯಲ್ಲಿ ನಲಿಯುತ್ತಿದ್ದ ಪುಟ್ಟ ಮಕ್ಕಳು, ಗಂಡಸರು-ಹೆಂಗಸರೆನ್ನದೆ ಬೇಧಭಾವವಿಲ್ಲದೆ ಕೆಸರಿನಲ್ಲಿ ಕಲೆತು ಸಂತೋಷ ಪಡುತ್ತಿದ್ದ ನಾಗರಿಕರು, ವೃದ್ಧ-ವೃದ್ಧೆಯರು ಮನೆಮಂದಿಯ ಆಸರೆಯಲ್ಲಿ ಕೆಸರಿನ ಗದ್ದೆಯವರೆಗೆ ಬಂದು ಸಂಭ್ರಮದಲ್ಲಿ ಪಾಲ್ಗೊಂಡರೆ ಮಕ್ಕಳು ಮುಂಜಾನೆ ಗದ್ದೆಗಿಳಿದು ಸಂಜೆಯವರೆಗೆ ಗದ್ದೆಯಲ್ಲೇ ಕಾಲ ಕಳೆದರು. ಇದು ಕಳೆದ ಆದಿತ್ಯವಾರ ಪೊಳಲಿಯ ಬಡಕಬೈಲು ಎಂಬಲ್ಲಿ ನಡೆದ `ಕೆಸರ್ಡೊಂಜಿ ದಿನ’ ವಿಶೇಷ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಾವಳಿ.
ಆಷಾಢ ಮಾಸವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ರಾಜಶ್ರೀ ಯುವಕ ಮಂಡಲ(ರಿ)ಪೊಳಲಿ ಮತ್ತು ರಾಜೇಶ್ವರೀ ಮಹಿಳಾ ಮಂಡಳಿ(ರಿ)ಪೊಳಲಿ ಇವರ ಸಹಯೋಗದೊಂದಿಗೆ 4ನೇ ವರ್ಷದ “ಆಟಿಡ್ ಕೇಸರ್ಡೊಂಜಿ ದಿನ” ಕಾರ್ಯಕ್ರಮವು ಇಲ್ಲಿನ ದಿ.ಮಂಜಯ್ಯ ಚೌಟರ ಮನೆ ವಠಾರದಲ್ಲಿ ಆ.10ರಂದು ಭಾನುವಾರ ನಡೆಯಿತು. ಕಾರ್ಯಕ್ರಮಕ್ಕೆ ಬರುವ ಅತಿಥಿ ಗಣ್ಯರ ಕಾಲು ತೊಳೆಯಲು ತುಳುನಾಡಿನ ಸಂಪ್ರದಾಯದಂತೆ ನೀರು ಕೊಟ್ಟು ಬೆಲ್ಲ-ನೀರಿನ ಸತ್ಕಾರ ಕೊಟ್ಟು ಸ್ವಾಗತಿಸಿದ್ದು ಇಲ್ಲಿನ ವಿಶೇಷ.
ಹಿರಿಯ ಕೃಷಿಕ ದೀಪ ಬೆಳಗಿಸಿ ಚಾಲನೆ:
ಕರಿಯಂಗಳ ಗ್ರಾಮದ ಗಂಪ ವಾಮನ ಪೂಜಾರಿ ಅವರು ಹಿರಿಯ ಕೃಷಿಕರಾಗಿದ್ದು ಪರಮೇಶ್ವರರಾಯರ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚೆನ್ನೆಮಣೆ ಆಡುವ ಮೂಲಕ ಉದ್ಘಾಟನೆ:
ತುಳುನಾಡಿನ ಸಂಪ್ರದಾಯಿಕ ಕ್ರೀಡೆಗಳಲ್ಲಿ ಚೆನ್ನೆಮಣೆಗೂ ವಿಶೇಷ ಸ್ಥಾನವಿದೆ. ಚೆನ್ನೆಮಣೆ ಆಟಕ್ಕೆ ತಲೆತಲಾಂತರಗಳ ಇತಿಹಾಸವೂ ಇದೆ. ಹೀಗಾಗಿ ಕಾರ್ಯಕ್ರಮದ ಉದ್ಘಾಟನೆಯನ್ನು ಚೆನ್ನೆಮಣೆ ಆಡುವ ಉದ್ಘಾಟಿಸಲಾಯಿತು. ಉದ್ಯಮಿ ರಾಜೇಶ್ ನಾಕ್ ಉಳಿಪಾಡಿಗುತ್ತು ಹಾಗೂ ಸೋಮಶೇಖರ್ ಶೆಟ್ಟಿ ಕಿನ್ಯಾ ಅವರು ಚೆನ್ನೆಮಣೆ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ರಾಜಶ್ರೀ ಯುವಕ ಮಂಡಲದ ವತಿಯಿಂದ ಸ್ವಾಮಿ ವಿವೇಕ ಚೈತನ್ಯಾನಂದ ಅವರಿಗೆ ಚೆನ್ನೆಮಣೆಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.
ಮನರಂಜಿಸಿದ ಕೆಸರುಗದ್ದೆ ಕ್ರೀಡಾಕೂಟ:
ಕೆಸರಿನ ಗದ್ದೆಯಲ್ಲಿ ಮಕ್ಕಳು ಮತ್ತು ಹಿರಿಯರಿಗೆ ನಡೆದ ಕಾಗದದ ದೋಣಿ ಬಿಡುವ ಸ್ಪಧರ್ೆ, ತಪ್ಪಂಗಾಯಿ ಸ್ಪಧರ್ೆ, ಲಿಂಬೆಹಣ್ಣಿನ ಓಟ, ಹಗ್ಗಜಗ್ಗಾಟ, ಮಾನವ ಪಿರಮಿಡ್, ಸೊಂಟಕ್ಕೆ ಹಗ್ಗ ಹಾಕಿ ಎಳೆಯುವುದು, ಚಕ್ಕುಲಿ ತಿನ್ನುವ ಸ್ಪಧರ್ೆ ಕ್ರೀಡಾಕೂಟ ನೆರೆದವರ ಜನಮನ ರಂಜಿಸಿತ್ತು. ಹಿರಿಯರು-ಕಿರಿಯರೆನ್ನದೆ ಎಲ್ಲರೂ ಕೆಸರುಗದ್ದೆಗೆ ಇಳಿದು ಮೈತುಂಬಾ ಕೆಸರು ಮೆತ್ತಿಕೊಂಡು ಖುಷಿಪಟ್ಟರು. ತುಳುನಾಡಿನ ಜನಪದ ಕಲೆಯಾದ ಪಾಡ್ದನವನ್ನು ಹಿರಿಯ ಹೆಂಗಸರು ಹಾಡುವ ಮೂಲಕ ಕಾರ್ಯಕ್ರಮವನ್ನು ರಂಗೇರಿಸಿದರು.
ಗಮನ ಸೆಳೆದ ಪೊಳಲಿ ರಥ:
ಕೆಸರುಗದ್ದೆಯ ಮಧ್ಯಭಾಗದಲ್ಲಿ ಪೊಳಲಿಯ ರಥದ ಮಾದರಿ ಹಾಗೂ ದೋಣಿಯ ಆಕೃತಿ ಎಲ್ಲರ ಗಮನ ಸೆಳೆಯಿತು. ಮುಂಜಾನೆಯಿಂದಲೇ ಮಳೆರಾಯ ಆಗೊಮ್ಮೆ ಈಗೊಮ್ಮೆ ಎಂಟ್ರಿ ಕೊಡುತ್ತಿದ್ದರೂ ಅದನ್ನು ಲೆಕ್ಕಿಸದ ತುಳುನಾಡ ಕ್ರೀಡಾಪ್ರೇಮಿಗಳು ಮಳೆಯಲ್ಲಿ ನೆನೆಯುತ್ತಲೇ ಕ್ರೀಡಾಕೂಟವನ್ನು ಮನಸಾರೆ ಆನಂದಿಸಿದರು.
ಆಟಿದ ಅಟಿಲ್:
ಕೆಸರುಗದ್ದೆ ಕ್ರೀಡಾಕೂಟದ ಅಂಗವಾಗಿ ಬರುವ ಕ್ರೀಡಾಳುಗಳಿಗೆ ಹಾಗೂ ಸಾರ್ವಜನಿಕರಿಗೆ ತುಳುನಾಡಿನ ಆಟಿ(ಆಷಾಢ) ವಿಶೇಷ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಖಾರ ಚಟ್ನಿ, ಬಿಸಿಗಂಜಿ, ಚಟ್ನಿ, ಉಪ್ಪಡ್ ಪಚ್ಚಿರ್(ಹಲಸಿನ ಖಾದ್ಯ) ಇತ್ಯಾದಿ ಮೆನುವನ್ನೊಳಗೊಂಡ ಊಟ ಎಲ್ಲರ ದಣಿವನ್ನು ತಣಿಸಿತ್ತು.
ಎಲ್ಲರಿಗೂ ಬಹುಮಾನ:
ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನವನ್ನು ನೀಡಿದ್ದು ಈ ಕಾರ್ಯಕ್ರಮದ ಮತ್ತೊಂದು ವಿಶೇಷ. ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಗೆದ್ದ ಕ್ರೀಡಾಳುಗಳಿಗೆ 1000, 500, 250 ನಗದು ಬಹುಮಾನದ ಜೊತೆಗೆ ಸ್ಮರಣಿಕೆಯನ್ನು ಕೊಟ್ಟು ಅಭಿನಂದಿಸಲಾಯಿತು. ಬಹುಮಾನ ವಿತರಣೆಯನ್ನು ಸುಖೇಶ್ ಚೌಟ, ಚಂದ್ರಶೇಖರ ಶೆಟ್ಟಿ, ಜಯಂತ ಮಣಿಕಂಠಪುರ, ಚಂದ್ರಿಕಾ ಪೊಳಲಿ ಇವರು ನೆರವೇರಿಸಿದರು.
ಕಾರ್ಯಕ್ರಮವನ್ನು ಕೃಷಿಕರಾದ ಗಂಪ ವಾಮನ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಲ್ಲಿಕಾ ಎಂ.ಚೌಟ ಬಡಕಬೈಲ್ ಆಟಿ ತಿಂಗಳ ವಿಶೇಷತೆಯನ್ನು ವಿವರಿಸಿದರು. ಕೆ.ಮಹೇಂದ್ರನಾಥ ಸಾಲೆತ್ತೂರು ಆಟಿ ತಿಂಗಳ ಮಹತ್ವವನ್ನು ಸಾರಿದರು. ತುಳು ಸಿನಿಮಾ, ನಾಟಕ ಕಲಾವಿದ ಭೋಜರಾಜ್ ವಾಮಂಜೂರು ಉಪಸ್ಥಿತರಿದ್ದರು. ಕಲಾಶ್ರೀ ಮಿತ್ರ ಬಳಗ ಬಡಕಬೈಲ್ ಮತ್ತು ಮಣಿಕಂಠ ಸೇವಾ ಸಮಿತಿ ಮಣಿಕಂಠಪುರ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.





































