ಬಂಟ್ವಾಳ: ವಟಪುರ ಕ್ಷೇತ್ರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಐದು ದಿನಗಳ ಕಾಲ ಆರಾಧಿಸಲ್ಪಟ್ಟ ಸುವರ್ಣ ಮಹೋತ್ಸವ ಸಂಭ್ರಮದ ಶ್ರೀ ಶಾರದೋತ್ಸವ ಸೋಮವಾರ ಮುಂಜಾನೆ ಸಂಪನ್ನಗೊಂಡಿತು. ಭಾನುವಾರ ಸಂಜೆ ವಿಸರ್ಜನಾ ಪೂಜೆಯ ಬಳಿಕ ಮಂಗಳೂರು ಮಲ್ಲಿಗೆಯ ಜಲ್ಲೆ ಮುಡಿಸಿದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಹೊರಾಂಗಣದಲ್ಲಿರಿಸಲಾಯಿತು.

ಇದೇ ವೇಳೆ ವೇದಿಕೆಯಲ್ಲಿ ಹುಲಿ ವೇಷ ಸಹಿತ ವಿವಿಧ ವೇಷಧಾರಿಗಳ ಕುಣಿತದ ಪ್ರದರ್ಶನ ನಡೆಯಿತು.ಮಳೆಯ ನಡುವೆಯು ಸಾವಿರಾರು ಮಂದಿ ಭಕ್ತರು ಶಾರದಾಂಬೆಯನ್ನು ಕಣ್ತುಂಬಿಕೊಂಡರು. ದೇವಳದ ವಠಾರದಿಂದ ಹೊರಟ ವೈಭವಪೂರ್ಣ ಶೋಭಾಯಾತ್ರೆ ರಥಬೀದಿಯಲ್ಲಿ ಸಾಗಿ ಬೈಪಾಸ್ ಶ್ರೀ ರಾಮ ಭಜನಾಮಂದಿರದ ವರೆಗೆ ತೆರಳಿ ಅಲ್ಲಿಂದ ವಾಪಾಸ್ ಆದೇ ದಾರಿಯಾಗಿ ಬಂದು ಬಡ್ಡಕಟ್ಟೆ ಹನುಮಾನ್ ದೇವಳದ ವರೆಗೆ ಸಾಗಿ ಅಲ್ಲಿಂದ ವಾಪಾಸ್ ಬಂದು ತ್ಯಾಗರಾಜ ರಸ್ತೆಯ ಮೂಲಕ ತೆರಳಿ ದೇವಳದ ಮುಂಭಾಗದಲ್ಲಿ ನೇತ್ರಾವತಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಶಾರದಮಾತೆಯನ್ನು ಭಜಕರು ಹೆಗಲಲ್ಲೆ ಹೊತ್ತುಕೊಂಡು ಶೋಭಾಯಾತ್ರೆಯಲ್ಲಿ ಸಾಗಿ ಬಂದರು.ಅಬ್ಬರದ ಹುಲಿವೇಷಗಳು, ಮನಮೋಹಕವಾದ ಸ್ತಬ್ದಚಿತ್ರಗಳು,ಟ್ಯಾಬ್ಲೋ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.ಮಧ್ಯರಾತ್ರಿಯ ಬಳಿಕ ವರುಣನು ಕ್ರಪೆ ತೋರಿತ್ತು.ಸುವರ್ಣಮಹೋತ್ಸವ ಅಧ್ಯಕ್ಷ ಗೋವಿಂದ ಪ್ರಭು ಸೇರಿದಂತೆ ಸಮಿತಿ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರು
