ಬಂಟ್ವಾಳ: ತೋಟಗಾರಿಕೆ ಇಲಾಖೆ ಮತ್ತು ದ.ಕ.ಜಿಲ್ಲಾ ಪಂಚಾಯತ್ ವತಿಯಿಂದ ತೋಟಗಾರಿಕಾ ಪಿತಾಮಹ ಡಾ| ಎಮ್.ಎಚ್ ಮರಿಗೌಡ ಜನ್ಮ ದಿನದ ಪ್ರಯುಕ್ತ ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮ ಬಿಸಿರೋಡಿನ ಶಿಕ್ಷಣಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಶಿಕ್ಷಕರಿಗೆ ಗಿಡ ವಿತರಣೆಯ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಲಾಖೆ ಗಿಡಗಳನ್ನು ನೀಡುವುದು ಮಾತ್ರ ಜವಬ್ದಾರಿಯಲ್ಲ , ಅದನ್ನು ನೆಡುವ ಮತ್ತು ಬೆಳೆಸುವ ಮಹತ್ತರ ಪಾತ್ರ ಕೂಡ ಇದೆ ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಪ್ರೇಮದ ಪ್ರಜ್ಞೆಯನ್ನು ಮೂಡಿಸುವ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ ಜೊತೆಗೆ ಮಾನವ ಸಂಪನ್ಮೂಲವನ್ನು ಉಳಿಸುವ ಕೆಲಸ ಬಹು ಮುಖ್ಯವಾಗಿ ಆಗಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರು, ಪರಿಸರವನ್ನು ಉಳಿಸುವ ಬಗ್ಗೆ ಅರಿವು ಮೂಡಿಸುವ ಕೆಲಸ ಶಾಲಾ ಮಕ್ಕಳಿಗೆ ಇಲಾಖೆ ಮಾಡಬೇಕಾಗಿದೆ ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಶಿವ ಪ್ರಕಾಶ್ ಮತ್ತು ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಹೆಚ್ ಆರ್ ನಾಯಕ್ ಉಪಸ್ಥಿತರಿದ್ದರು. ಬಂಟ್ವಾಳ ಸಹಾಯಕ ತೋಟಗಾರಿಕಾ ನಿರ್ದೇಶಕ ದಿನೇಶ್ ಸ್ವಾಗತಿಸಿ ವಂದಿಸಿದರು.

