ಬೆಂಗಳೂರು : ‘ಮಂಗಳೂರು ಚಲೋ’ ಹೊರಟಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಹೊರಟಿದ್ದ ಜಾಥಾವನ್ನು ಪೊಲೀಸರು ತಡೆದಿದ್ದಾರೆ.
ಮಂಗಳವಾರ ಬೆಳಗ್ಗೆ ಫ್ರೀಡಂಪಾರ್ಕ್ನಿಂದ ಬಿಜೆಪಿ ನಾಯಕರು ಮಂಗಳೂರಿಗೆ ಬೈಕ್ ಜಾಥಾ ಹೊರಡಬೇಕಿತ್ತು. ಆದರೆ, ಫ್ರೀಡಂಪಾರ್ಕ್ಗೆ ಬರದಂತೆ ನಗರದ ಹಲವು ಕಡೆ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆದರೂ, ಹಲವು ಬೈಕ್ಗಳಲ್ಲಿ ಕಾರ್ಯಕರ್ತರು ಆಗಮಿಸಿದ್ದರು.ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ, ಮಾಜಿ ಡಿಸಿಎಂ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು. ಆದರೆ, ಜಾಥಾ ಹೊರಡಲು ಪೊಲೀಸರು ಅವಕಾಶ ನೀಡಲಿಲ್ಲ.
‘ಮಂಗಳೂರು ಚಲೋ’ ರ್ಯಾಲಿಗೆ ಹೆಚ್ಚಿನ ಜಿಲ್ಲೆಗಳಲ್ಲಿ ನಿರ್ಬಂಧ
ಮೊದಲು ಕಾರ್ಯಕರ್ತರು ಆಗಮಿಸಿದ್ದ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನು ಖಂಡಿಸಿ ಬಿಜೆಪಿ ನಾಯಕರು ಧರಣಿ ಆರಂಭಿಸಿದರು. ತಕ್ಷಣ ಪೊಲೀಸರು ಅವರನ್ನು ಬಂಧಿಸಲು ಮುಂದಾದರು. ಆಗ ರಸ್ತೆ ಮಧ್ಯೆ ಕುಳಿತು ಧರಣಿ ಆರಂಭಿಸಿದರು.ನಂತರ ಪೊಲೀಸರು ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪ್ರತಾಪ್ ಸಿಂಹ ಅವರು ಮಫ್ತಿಯಲ್ಲಿದ್ದ ಪೊಲೀಸರಿಂದ ಬಿಡಿಸಿಕೊಳ್ಳಲು ಪ್ರಯತ್ನ ನಡೆಸಿದರು. ನಾಯಕರನ್ನು ಸುತ್ತುವರೆದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು, ಸಿರ್ಸಿ ಸರ್ಕಲ್ ಬಳಿ ಇರುವ ಸಿಎಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.
