ಬಜ್ಪೆ: ಪೊಳಲಿಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ 19ನೇ ಜಿಲ್ಲಾ ಸಮ್ಮೇಳನದ ಮುನ್ನ ಭುವನೇಶ್ವರಿ ದೇವಿಯ ದಿಬ್ಬಣ ಪೊಳಲಿ ಸೇತುವೆಯಿಂದ ಸಮ್ಮೇಳನದ ನಡೆಯುವ ಸ್ಥಳವಾದ ಪೊಳಲಿ ದೇಗುಲದಲ್ಲಿ ಹಾಕಲಾದ ಪ್ರಾಂಗಣಕ್ಕೆ ತಲುಪಿತು. ಬೆಳಿಗ್ಗೆ ಎಂಟರ ಸುಮಾರಿಗೆ ಹೊರಟ ದಿಬ್ಬಣದ ಮೆರವಣಿಗೆಯನ್ನು ಜಿ.ಪಂ. ಸದಸ್ಯರಾದ ಜಯಶ್ರೀ ಕೆ.ಎ ಉದ್ಘಾಟಿಸಿದರು. ಪೊಳಲಿಯ ಅನುವಂಶಿಕ ಮೊಕ್ತೇಸರರಾದ ಚೇರ ಸೂರ್ಯನಾರಾಯಣ ರಾವ್ ಭುವನೇಶ್ವರಿಗೆ ದೇವಿಗೆ ಪುಷ್ಪಾರ್ಚನೆ ಮಾಡಿದರು. ತಾ.ಪಂ ಸದಸ್ಯರಾದ ಗುಣವತಿ ದೀಪ ಪ್ರಜ್ವಲಿಸಿದರು.
ಭುವನೇಶ್ವರಿಯನ್ನು ಪಲ್ಲಕಿಯ ಮೇಲೆ ಕುಳ್ಳಿರಿಸಿ ಮೆರವಣಿಗೆಯ ಮುಖಾಂತರ ತರಲಾಯ್ತು. ದೈತ್ಯ ಬೊಂಬೆಗಳು, ಕಲಶ ಹಿಡಿದುಕೊಂಡ ನಾರಿಯರು, ನಿಶಾನೆ, ಚೆಂಡೆವಾದನ, ಕರಗ ನೃತ್ಯ, ಕೀಲು ಕುದುರೆ, ಶಾಲಾ ಮಕ್ಕಳ ಸೈನ್ಯ, ಕನ್ನಡಾಸಕ್ತರ ದಂಡು ಮೆರವಣಿಗೆಯಲ್ಲಿ ಸಾಗಿಬಂದಿತು. ಜೊತೆಗೆ ಸಮ್ಮೇಳನದ ಸಂಘಟಕರು, ಸಾಹಿತಿಗಳು, ಚಿಂತಕರು, ವಿದ್ವಾಂಸರು, ಕಲಾಕಾರರು, ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.
















