ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆ ಮತ್ತು ಮುಂದುವರಿಯುತ್ತಿರುವ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ನ ಕೈಕಂಬ ಪೊಳಲಿ ದ್ವಾರದಿಂದ ಕಲ್ಲಡ್ಕತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಶಾಂತಿಗಾಗಿ ಪಾದಯಾತ್ರೆ’ ನಡೆಸಲು ಇಲ್ಲಿನ ನಾಗರಿಕರು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಬಿ.ಸಿ.ರೋಡ್ನಲ್ಲಿ ಈಚೆಗೆ ಸಮಾಲೋಚನಾ ಸಭೆ ನಡೆಸಿ, ಒಟ್ಟು 23 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹೊಂದಿರುವ ‘ಕೋಮು ಸೌಹಾರ್ದತಾ ಸಮಿತಿ’ ರಚಿಸಲಾಗಿದೆ.
ಸಮಿತಿ ಅಧ್ಯಕ್ಷರಾಗಿ ಸ್ಥಳೀಯ ಜೆಡಿಎಸ್ ಮುಖಂಡ ಬಿ.ಮೋಹನ್ ಮತ್ತು ಸಂಚಾಲಕರಾಗಿ ಹೋರಾಟಗಾರ ಬಿ.ಎಂ.ಪ್ರಭಾಕರ ದೈವಗುಡ್ಡೆ ಇವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಿಪಿಎಂ ಮುಖಂಡ ರಾಮಣ್ಣ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಸಿಪಿಐ ಮುಖಂಡ ಬಿ.ಶೇಖರ್, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಗುಂಪಕಲ್ಲು, ಕೋಶಾಧಿಕಾರಿಯಾಗಿ ರಾಜಾ ಚೆಂಡ್ತಿಮಾರ್ ಇವರು ಆಯ್ಕೆಯಾಗಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
