ಮೂಡುಬಿದಿರೆ: ಹೊಸಬೆಟ್ಟು ಸಮೀಪದ ಮಾಸ್ತಿಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಬಲವಂತದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಬಿಜೆಪಿಗರ ಕೃತ್ಯ ಸಿ.ಸಿ ಕ್ಯಾಮರದಲ್ಲಿ ದಾಖಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ನ ಚಂದ್ರಹಾಸ್ ಸನಿಲ್ ವಿರುದ್ಧ ಈ ಹಿಂದೆ ಪೊಲೀಸ್ಠಾಣೆಯಲ್ಲಿ ಕ್ರಿಮಿನಲ್ ಕೇಸ್ ಇಲ್ಲ. ಆದರು ಅವರನ್ನು ಗೂಂಡಾ ಎಂದು ಆರೋಪಿಸಿರುವ ಬಿಜೆಪಿ ಮುಖಂಡರೊಬ್ಬರ ಮೇಲೆ ಬಜ್ಪೆ ಪೊಲೀಸ್ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಕೇಸು ಅವರ ಗೂಂಡಾ ನಡವಳಿಕೆಗೆ ಸಾಕ್ಷಿ. ಚಂದ್ರಹಾಸ್ ಸನಿಲ್ರ ಕಟುಂಬಕ್ಕೆ ಸೇರಿದ ಹೊಸಬೆಟ್ಟುವಿನಲ್ಲಿರುವ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾಗ ಬಿಜೆಪಿಯ ವಲೇರಿಯನ್ ಕುಟಿನ್ಹಾ ಅಲ್ಲಿಗೆ ಬಂದು ಉದ್ದೇಶಪೂರಕವಾಗಿ ಜಗಳಕ್ಕಿಳಿದು ವಿವಾದ ಸೃಷ್ಟಿಸಿದ್ದರು.
ಮೂಡುಬಿದಿರೆಯ ಹನುಮಂತ ದೇವಸ್ಥಾನಕ್ಕೆ ಇದುವರೆಗೆ ಹೋಗದ ಕೆಲ ಬಿಜೆಪಿಗರು ಮೊನ್ನೆ ಭೇಟಿ ನೀಡಿ ಸೀಯಾಳಾಭಿಷೇಕ ಮಾಡಿದ್ದಾರೆ. ಹೊಸಬೆಟ್ಟು ಘಟನೆಯ ಸತ್ಯಾಂಶ ಹೊರಬರಲು ನಾವು ಕೂಡ ಪ್ರಕರಣವನ್ನು ಹನಮಂತನ ಸನ್ನಿಧಿಗೆ ಬಿಟ್ಟಿದ್ದೇವೆ ಎಂದು ಸುರೇಶ್ ಕೋಟ್ಯಾನ್ ಹೇಳಿದರು.
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಕಾಂಗ್ರೆಸ್ ಮುಖಂಡರಾದ ಜೊಸ್ಸಿ ಮಿನೇಜಸ್, ಸುಂದರ ಸಿ. ಪೂಜಾರಿ, ಅನಿಲ್ ಲೋಬೊ, ವಾಸು ಪೂಜಾರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

