ಮೂಡುಬಿದಿರೆ: ನೀರ್ಕೆರೆ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ವಿಜಯಶ್ರೀ ಹಾಲಾಡಿ ಅವರ ‘ಪಪ್ಪು ನಾಯಿಯ ಪೀಪಿ’ ಕೃತಿ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪುಸ್ತಕ ಬಹುಮಾನ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ ಕುಂದಾಪುರದ ಹಾಲಾಡಿಯವರಾದ ವಿಜಯಶ್ರೀ ಕಳೆದ ಆರು ವರ್ಷಗಳಿಂದ ನೀರ್ಕೆರೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಈಗಾಗಲೇ ಅವರ ನಾಲ್ಕು ಕೃತಿಗಳು ಪ್ರಕಟವಾಗಿವೆ.
ಮೊದಲ ಕವನ ಸಂಕಲನ ಬೀಜ ಹಸಿರಾಗುವ ಘಳಿಗೆ ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಅಖಿಲ ಭಾರತ ಮಹಿಳಾ ಕಾವ್ಯ ಪ್ರಶಸ್ತಿ, ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಶಾರದಾ ರಾವ್ ದತ್ತಿ ಪ್ರಶಸ್ತಿ ಪಡೆದಿದೆ. ಪಪ್ಪು ನಾಯಿಯ ಪೀಪಿ ಮಕ್ಕಳ ಸಾಹಿತ್ಯ ಕೃತಿ ಈಗಾಗಲೇ ಜಿ.ಬಿ. ಹೊಂಬಳ ರಾಜ್ಯ ಪ್ರಶಸ್ತಿ(2015) ಪಡೆದಿದೆ. ‘ಅಲೆಮಾರಿ ಇರುಳು’ ಹಾಗೂ ಓತಿಖ್ಯಾತ ತಲೆ ಕುಣ್ಸಿ ಅವರ ಇತರ ಪ್ರಕಟಿತ ಸಾಹಿತ್ಯ ಕೃತಿಗಳು. ಅವರ ಎರಡು ಮಕ್ಕಳ ಕವನಗಳು ಸಿಬಿಎಸ್ಸಿ ಪ್ರಾಥಮಿಕ ಪಠ್ಯದಲ್ಲಿವೆ.

