ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಅಭಿನಂದಿಸುವ ಕಾರ್ಯಕ್ರಮವು ನಿಡ್ಡೋಡಿ ಚಾವಡಿ ಮನೆಯಲ್ಲಿ ನಡೆಯಿತು.
ಸೇವಾ ಸಂಸ್ಥೆಯ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಿವೃತ್ತ ಅಂಚೆ ಪಾಲಕ, ಸಾಹಿತಿ ಸದಾನಂದ ನಾರಾವಿ ಹಾಗೂ ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷ ನರೇಂದ್ರ ಕೆರೆಕಾಡು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು.
ಹೆಬ್ರಿ ಸೋಮೇಶ್ವರ ಡಾ.ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಸಮಾಜದಲ್ಲಿ ಪತ್ರಕರ್ತರನ್ನು ಹತ್ತಿಕ್ಕುವಂತಹ ಕೆಲಸ ಹಾಗೂ ಆಮಿಷವನ್ನು ಒಡ್ಡುವಂತಹ ಕೆಲಸವನ್ನು ಕೆಲವು ಸಮಾಜಘಾತುಕ ಶಕ್ತಿಗಳು ಮಾಡುತ್ತವೆ. ಆದ್ದರಿಂದ ಯಾವುದೇ ಆಮಿಷಗಳಿಗೆ ಬಲಿಯಾಗದೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಜನರು ಜಾಗೃತವಾಗುವ ನಿಟ್ಟಿನಲ್ಲಿ ಸಮಾಜದ ವಿವಿಧ ಸಂಘ ಸಂಸ್ಥೆಗಳ ದೊಡ್ಡ ಹೊಣೆಯಿದೆ ಎಂದು ಹೇಳಿದರು.
ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಲ್ಲಮುಂಡ್ಕೂರು ಗ್ರಾ.ಪಂ ಉಪಾಧ್ಯಕ್ಷ ಸುಂದರ ಪೂಜಾರಿ, ಜ್ಞಾನರತ್ನ ಎಜುಕೇಶನ್ ಪೌಂಡೇಶನ್ನ ಭಾಸ್ಕರ್ ದೇವಸ್ಯ, ಲೋಕಯ್ಯ ಪೂಜಾರಿ, ಜಯರಾಮ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೀತಾರಾಮ ಶೆಟ್ಟಿ ವಂದಿಸಿದರು.

