ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಮತ್ತು ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಬೆಳ್ಳಿ ಹರಕೆ ಮಾರಾಟಕ್ಕೆ ಏಕಾಯೇಕಿ ನಿರ್ಬಂಧ ಹೇರಿದ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ವಿಶೇಷ ಸಭೆ ಬಳಿಕ ದೇವಳದಲ್ಲಿ ಎರಡೆರಡು ಪ್ರತ್ಯೇಕ ಕಡೆ ಮಾರಾಟ ಮಾಡಲು ಇಲ್ಲಿನ ಪ್ರಭಾರ ಆಡಳಿತಾಧಿಕಾರಿ ಆಗಿರುವ ರಾಯಿ ಗ್ರಾಮ ಪಂಚಾಯಿತಿ ಪಿಡಿಒ ಒಪ್ಪಿದ ಘಟನೆ ನಡೆದಿದೆ.
ರಾಯಿ ಗ್ರಾಮ ಪಂಚಾಯಿತಿನಲ್ಲಿ ಗುರುವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಬಂಟ್ವಾಳ ತಾಲ್ಲೂಕಿನ ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ಸಿದ್ಧಕಟ್ಟೆ ವಲಯ ವಿಶ್ವಕರ್ಮ ಯುವಕ ಸಂಘದ ಪದಾಧಿಕಾರಿಗಳು ಪಿಡಿಒ ವೆಂಕಟೇಶ್ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಈ ಹಿಂದಿನಂತೆ ವಿಶ್ವಕರ್ಮರು ಸಹಿತ ಇದೇ ಪ್ರಥಮ ಬಾರಿಗೆ ದೇವಳದ ವತಿಯಿಂದಲೂ ಪ್ರತ್ಯೇಕ ಎರಡೆರಡು ಕಡೆ ಬೆಳ್ಳಿ ಹರಕೆ ಮಾರಾಟ ಮಾಡಲು ಪಿಡಿಒ ಒಪ್ಪಿದ್ದಾರೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ದೇವಳದ ಪ್ರಧಾನ ಅರ್ಚಕ ಕೆ.ಸುಂದರ ರಾವ್ ಸಹಿತ ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಪ್ರಮುಖರಾದ ಪ್ರಕಾಶ ಆಚಾರ್ಯ ಭಂಡಾರಿಬೆಟ್ಟು, ಸಂದೀಪ್ ಆಚಾರ್ಯ, ಯುವಕ ಸಂಘದ ಅಧ್ಯಕ್ಷ ಯೋಗೀಶ ಆಚಾರ್ಯ ಎಲ್ಪೇಲು, ಸ್ಥಾಪಕಾಧ್ಯಕ್ಷ ಅಶೋಕ ಆಚಾರ್ಯ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಪ್ರಮುಖರಾದ ಶಶಿಧರ ಆಚಾರ್ಯ, ಜಗದೀಶ ಆಚಾರ್ಯ, ವಸಂತ ಆಚಾರ್ಐ, ಸುರೇಶ ಆಚಾರ್ಯ ಮತ್ತಿತರರು ಇದ್ದರು.

