ಬಂಟ್ವಾಳ: ಇಲ್ಲಿನ ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆಯುವವರ ವಿರುದ್ಧ ದಂಡನೆಯಂತ ಕಠಿಣ ಕ್ರಮ ಕೈಗೊಂಡು ಸಿಸಿ ಕ್ಯಾಮೆರಾ ಅಳವಡಿಸಬೇಕು. ಮಾತ್ರವಲ್ಲದೆ ರಸ್ತೆ ಬದಿ ಪಾದಚಾರಿಗಳಿಗೆ ನಡೆದಾಡಲು ಫುಟ್ಪಾತ್ ನಿರ್ಮಿಸಿ ಬಂಟ್ವಾಳ ನತ್ತು ಬಿ.ಸಿ.ರೋಡ್ನಲ್ಲಿ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಪುರಸಭೆಯಲ್ಲಿ ಸೋಮವಾರ ಸಲಹೆ ನೀಡಿ ಗಮನ ಸೆಳೆದಿದ್ದಾರೆ. ಬಂಟ್ವಾಳ ಪುರಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ಈ ಅಭಿಪ್ರಾಯ ಕೇಳಿ ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಪ್ರತಿಕ್ರಿಯಿಸಿ, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮುಂದಿನ ವರ್ಷಕ್ಕೆ ರೂ 1.60 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗಿದ್ದು, ಗುತ್ತಿಗೆದಾರರ ಮೂಲಕ ಅನುಷ್ಠಾನಗೊ:ಇಸಲಾಗುತ್ತಿದೆ. ಅಕ್ರಮ ನಳ್ಳಿ ನೀರು ಸಂಪರ್ಕ ಸಕ್ರಮಗೊಳಿಸಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಒಳ ಚರಂಡಿ ಯೋಜನೆ ಅರ್ಧದಲ್ಲೇ ಸ್ಥಗಿತಗೊಂಡ ಪರಿಣಾಮ ಮ್ಯಾನ್ಹೋಲ್ ತೆಎದು ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದೆ ಎಂದು ನಿವೃತ್ತ ಮುಖ್ಯಾಧಿಕಾರಿ ಶಿವಶಂಕರ್ ಕೆ. ಗಮನ ಸೆಳೆದರು. ಜಿಲ್ಲೆಯಲ್ಲಿ ನೇತ್ರಾವತಿ ನದಿಯಿಂದ ಎಸ್ಇಝೆಡ್ನಂತಹ ಕೈಗಾರಿಕೆಗಳಿಗೆ ನೀರು ಪೂರೈಸಲಾಗುತ್ತಿದ್ದು, ಕೃಷಿಗೆ ಮಾತ್ರ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಹೋರಾಟಗಾರ ಸುಂದರ್ ರಾವ್ ಹೇಳಿದರು. ಪ್ರಮುಖರಾದ ಚಂದ್ರಶೇಖರಯ್ಯ, ಮಹಾಬಲೇಶ್ವರ ಹೆಬ್ಬಾರ್, ಎಸ್.ಆರ್.ಪಟವರ್ಧನ್, ಡಾ. ವಸಂತ ಬಾಳಿಗಾ, ದಾಮೋದರ್, ಸುಭಾಶ್ಚಂದ್ರ ಜೈನ್, ಗಿರೀಶ್ ಪೈ ಮತ್ತಿತರರು ವಿಷಯ ಮಂಡಿಸಿದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಮಹಮ್ಮದ್ ಶರೀಫ್ ಮತ್ತಿತರರು ಇದ್ದರು.

