ಬಂಟ್ವಾಳ: ತುಂಬೆ ಗ್ರಾಮದ ಪರನೀರು ಎಂಬಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ಸುಮಾರು 40 ಲೋಡಿನಷ್ಟು ಅಕ್ರಮ ಮರಳನ್ನು ಮುಟ್ಟುಗೋಲು ಹಾಕಿದೆ.
ಜಿಲ್ಲಾಧಿಕಾರಿ ಡಾ. ಜಗದೀಶ್ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಪುರಂದರ ಹೆಗಡೆ ನೇತೃತ್ವದ ತಂಡ ಕಳೆದ ಮಧ್ಯೆ ರಾತ್ರಿ ಈ ದಾಳಿ ಕಾರ್ಯಾಚರಣೆ ನಡೆಸಿದೆ. ಇಲ್ಲಿನ ಮೋಹನ್ ರಾವ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಈ ಅಕ್ರಮ ಮರಳು ದಾಸ್ತಾನಿಡಲಾಗಿತ್ತು. ಖಚಿತ ಮಾಹಿತಿ ಅನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ಈ ದಾಳಿ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಈ ಬಗ್ಗೆ ಜಮೀನಿನ ಮಾಲಕ ಮೋಹನ್ ರಾವ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕರಾದ ನವೀನ್, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕೆ., ಭೂ-ಗಣಿ ಇಲಾಖೆಯ ಗಿರೀಶ್ ಮೋಹನ್, ಗ್ರಾಮ ಕರಣಿಕರಾದ ಜನಾರ್ದನ್, ಯೋಗಾನಂದ, ರಾಜು, ರಾಜಶೇಖರ, ಬಸಪ್ಪ, ತಾಲೂಕು ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶಿವಪ್ರಸಾದ್ ಅಮ್ಟೂರು ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

