ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನ ಪದವು ಎಂಬಲ್ಲಿ ವ್ಯಕ್ತಿಯೋರ್ವರು ಅತಿಕ್ರಮಿಸಿದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕೊಳವೆ ಬಾವಿ ನಿರ್ಮಿಸಿರುವ ಬಗ್ಗೆ ಪ್ರಶಾಂತ್ ಕೊಟ್ಟಾರಿ ಎಂಬವರು ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಅಮ್ಮುಂಜೆ ಗ್ರಾಮದ ಬೆಂಜನಪದವು ಶಿವಾಜಿ ನಗರ ಎಂಬಲ್ಲಿ ವ್ಯಕ್ತಿಯೋರ್ವರು ಸುಮಾರು 50 ಸೆಂಟ್ಸ್ಗಿಂತ ಹೆಚ್ಚು ವಿಸ್ತೀರ್ಣದ ಸರಕಾರದ ಆಸ್ತಿಯನ್ನು ಕಬಳಿಸಿ ಇದೀಗ ಅದೇ ಜಾಗದಲ್ಲಿ ಪಂಚಾಯಿತಿನಿಂದ ಪರಾವನಿಗೆಯನ್ನು ಪಡೆಯದೆ ಕೊಳವೆ ಬಾವಿ ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊಳವೆ ಬಾವಿ ತೋಡಲು ಯಾವುದೇ ಪರವನಿಗೆ ನೀಡದಂತೆ ಹಾಗೂ ಕೊಳವೆ ಬಾವಿ ನಿರ್ಮಿಸಿದವರ ಮೇಲೆ ಶಿಸ್ತಿನ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಆದೇಶ ಇದ್ದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ.
ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿನ ಗ್ರಾಮಕರಣಿಕರು ಹಾಗೂ ಕಾರ್ಯದರ್ಶಿಯವರಿಗೆ ದೂರು ನೀಡಿದರೂ ಸ್ಪಂದಿಸದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು ತಕ್ಷಣ ಕೊಳವೆ ಬಾವಿಯನ್ನು ಮುಚ್ಚುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

