ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ಕ್ರಾಸ್ಕಂಟ್ರಿ ಚಾಂಪಿಯನ್ಶಿಪ್ಗೆ ಮೂಡಬಿದಿರೆಯಲ್ಲಿ ಸಿದ್ಧತೆ ನಡೆಯುತ್ತಿದೆ.
ರಾಜೀವ್ಗಾಂಧಿ ಆರೋಗ್ಯ ವಿ.ವಿ. ಬೆಂಗಳೂರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ. ರಾಷ್ಟ್ರದ ಸುಮಾರು 200 ವಿ.ವಿ.ಗಳಿಂದ 3000 ಮಂದಿ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ ಆಕ್ಟೋಬರ್ 28ರಂದು ಮುಂಜಾನೆ 6.45ಕ್ಕೆ ಮಹಿಳೆಯರ 6 ಕಿ.ಮೀ ಸ್ಪರ್ಧೆ ಹಾಗೂ 7.30 ನಿಮಿಷಕ್ಕೆ ಪುರುಷರ 12 ಕಿ.ಮೀ. ಸ್ಪರ್ಧೆ ಆರಂಭಗೊಳ್ಳಲಿದೆ. ಎರಡೂ ವಿಭಾಗದ ಸ್ಪರ್ಧೆಗಳು ಸ್ವರಾಜ್ಯ ಮೈದಾನದಲ್ಲಿ ಆರಂಭಗೊಂಡು ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಸ್ಪರ್ಧೆ ಅಂತ್ಯಗೊಳ್ಳಿದೆ.
ಸ್ಪರ್ಧೆಯ ಆರಂಭಿಕ ಸ್ಥಳದಲ್ಲಿ ಸುಮಾರು 1200 ಕ್ರೀಡಾಪಟುಗಳಿಗೆ ಸರಾಗವಾಗಿ ಸ್ಪರ್ಧೆ ಆರಂಭಗೊಳ್ಳಲು 34 ಬ್ಲಾಕ್ಗಳ ಮೂಲಕ ಸುಸಜ್ಜಿತ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ವರಾಜ್ಯ ಮೈದಾನದ ಮೇಲ್ಭಾಗದ ಮೈದಾನವನ್ನು ವೈಬ್ರೇಟರ್ ರೋಲರ್ನ ಮೂಲಕ ಸಮತಗೊಟ್ಟಿಸಲಾಗಿದೆ. ಮಹಿಳೆಯರ 6ಕಿ.ಮೀ ಹಾಗೂ ಪುರುಷರ 12 ಕಿ.ಮೀ ವ್ಯಾಪ್ತಿಯ ರಸ್ತೆಯಲ್ಲಿ ಕ್ರೀಡಾಪಟುಗಳಿಗೆ ನೀರು, ವೈದ್ಯಕೀಯ ಸೌಲಭ್ಯ ಹಾಗೂ ಝೀರೋ ಪಾಯಿಂಟ್ ಟ್ರಾಫಿಕ್ನ ವ್ಯವಸ್ಥೆಯಿದೆ.
ಓಟಗಾರರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಡಿಜಿಟಲ್ ಕಾಲಮಾಪನದ ವ್ಯವಸ್ಥೆ, ಅಂತರ್ ವಿ.ವಿ. ಕ್ರಾಸ್ಕಂಟ್ರಿ ಸ್ಪರ್ಧೆಯ ಇತಿಹಾಸದಲ್ಲಿ ಮೊದಲ ಬಾರಿಗೆ ವಿಜೇತ ಕ್ರೀಡಾಪಟುಗಳಿಗೆ ಹಾಗೂ ತಂಡ ಪ್ರಶಸ್ತಿ ವಿಜೇತರುಗಳಿಗೆ ನಗದು ಪುರಸ್ಕಾರ ಸಿಗಲಿದೆ. ಚಾಂಪಿಯನ್ಶಿಪ್ನಲ್ಲಿ ಸುಮಾರು 150 ಮಂದಿ ಕ್ರೀಡಾ ತಾಂತ್ರಿಕ ಅಧಿಕಾರಿಗಳು 3,000 ಮಂದಿ ಕ್ರೀಡಾಪಟುಗಳು, 600 ಮದಿ ಕ್ರೀಡಾಧಿಕಾರಿಗಳು ಹಾಗೂ ಸುಮಾರು 150 ಮಂದಿ ಕ್ರೀಡಾ ಸಾಧಕರನ್ನು ವಿಶೇಷ ಆಹ್ವಾನಿಸಲಾಗಿದ್ದು ಈ ಕ್ರೀಡಾಕೂಟವನ್ನು ರಾಷ್ಟ್ರದ ಮಾದರಿ ಕ್ರೀಡಾಕೂಟವನ್ನಾಗಿ ಆಯೋಜಿಸಲಾಗುವುದೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಚಾಂಪಿಯನ್ಶಿಪ್ನ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕೆಗೆ ತಿಳಿಸಿದ್ದಾರೆ.

