ಮೂಡುಬಿದ್ರೆ: ಕಲ್ಲಬೆಟ್ಟು ಗ್ರಾಮದ ಕುಂಡಡ್ಕ ಎಂಬಲ್ಲಿ ರುಕ್ಮಯ್ಯ ಪೂಜಾರಿ ಎಂಬವರ ಮನೆಯ ಹಟ್ಟಿಯಲ್ಲಿದ್ದ ದನವನ್ನು ಶುಕ್ರವಾರ ರಾತ್ರಿ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ವಾರದ ಹಿಂದೆಯಷ್ಟೇ ಕರಿಂಜೆಯ ಅಣ್ಣಿ ಶೆಟ್ಟಿ ಎಂಬವರು ಬಯಲಿನಲ್ಲಿ ಮೇಯಲು ಕಟ್ಟಿ ಹಾಕಿದ್ದ ದನವನ್ನು ಚಿರತೆ ಕೊಂದು ಹಾಕಿತ್ತು. ಅದಕ್ಕೂ ಮುನ್ನ ಕರಿಂಜೆಯ ಭಾಸ್ಕರ ಶೆಟ್ಟಿಯವರಿಗೆ ಸೇರಿದ ದನವನ್ನು ಗಾಯಗೊಳಿಸಿತ್ತು.
ಇದೀಗ ಚಿರತೆ ದಾಳಿ ನಡೆಸಿ ದನವನ್ನು ಕೊಂದು ಹಾಕಿದ ರುಕ್ಮಯ್ಯ ಪೂಜಾರಿಯವರ ಮನೆಗೆ ಅರಣ್ಯಾಧಿಕಾರಿ ದಿನೇಶ್ ಜಿ.ಡಿ. ಹಾಗೂ ಸಿಬ್ಬಂಧಿಗಳು ಶನಿವಾರ ತೆರಳಿ ಪರಿಶೀಲನೆ ನಡೆಸಿದ್ದು ಚಿರತೆ ಓಡಾಡುವ ಪರಿಸರದಲ್ಲಿ ಎರಡು ಬೋನ್ಗಳನ್ನು ಇರಿಸಿದ್ದಾರೆ. ಬಡಕೃಷಿಕರ ದನಗಳನ್ನು ಚಿರತೆ ಕೊಂದು ಹಾಕುತ್ತಿರುವುದರಿಂದ ಅವರು ಆರ್ಥಿಕ ನಷ್ಟಕ್ಕೆ ಒಳಾಗುತ್ತಿದ್ದು ಅರಣ್ಯ ಇಲಾಖೆ ಅವರಿಗೆ ಪರಿಹಾರ ನೀಡಬೇಕೆಂದು ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಒತ್ತಾಯಿಸಿದ್ದಾರೆ.

