ಕಲ್ಲಡ್ಕ : ಅಡುಗೆಗೆಂದು ಹಚ್ಚಿದ ಬೆಂಕಿ ಮನೆಯನ್ನೇ ಭಸ್ಮವಾಗಿಸಿದ ಘಟನೆಯೊಂದು ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲಿ ಬುಧವಾರ ಹಾಡುಹಗಲೇ ನಡೆದಿದೆ. ಇಲ್ಲಿನ ನಿವಾಸಿ ಸೀತಾರಾಮ ಎಂಬವರ ಮನೆಯಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 15 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಘಟನೆ ವಿವರ:
ಸೀತಾರಾಮ ಅವರ ಮನೆಯ ಎದುರಿನ ಗದ್ದೆಯಲ್ಲಿ ಮನೆಮಂದಿ ನಾಟಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರ ಪತ್ನಿ ಅಡುಗೆ ಕೋಣೆಯ ಸೌದೆ ಒಲೆಯ ನೆರವಿನಿಂದ ಮಧ್ಯಾಹ್ನದ ಅಡುಗೆ ತಯಾರಿಯಲ್ಲಿದ್ದು, ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರ ಬಂದ ವೇಳೆ ಬೆಂಕಿ ಮನೆಯಿಡೀ ಆವರಿಸಿದೆ. ವಿಷಯ ತಿಳಿದಾಕ್ಷಣ ಸ್ಥಳೀಯರು ಹಾಗೂ ಮನೆಮಂದಿ ಬೆಂಕಿ ನಂದಿಸಲು ಯತ್ನಿಸಿದ್ದು, ಬಳಿಕ ಬಂಟ್ವಾಳ ಅಗ್ನಿ ಶಾಮಕಕ್ಕೆ ಕರೆ ಮಾಡಲಾಗಿದ್ದು, ಅವರು ಬೆಂಕಿ ನಂದಿಸಿದ್ದಾರೆ. ಆದರೆ ಆವೇಳೆಗಾಗಲೇ ಮನೆಯ ಸಾಮಾಗ್ರಿಗಳು ಮಹುತೇಕ ಬೆಂಕಿಗಾಹುತಿಯಾಗಿತ್ತು.
ಅಡುಗೆ ತಯಾರಿ ನಡೆಸುತ್ತಿದ್ದ ಮತ್ತೊಂದು ಪಾಶ್ರ್ವದಲ್ಲಿ ಗ್ಯಾಸ್ ಸಿಲಿಂಡರ್ ನ ಸ್ಟೌವ್ ಕೂಡ ಇದ್ದು, ಅದರಿಂದಾದ ಸೋರಿಕೆ ಈ ಅವಘಡಕ್ಕೆ ಕಾರಣವಾಯಿತೇ ಅಥವಾ ಒಲೆಯ ಬೆಂಕಿಯ ತೀವ್ರತೆ ಹೆಚ್ಚಾಗಿ ಈ ಅವಘಡ ನಡೆಯಿತೋ ಎಂಬುದು ಗೊತ್ತಾಗಿಲ್ಲ. ಘಟನೆಯ ವೇಳೆ ಮನೆಮಂದಿ ಮನೆಯಿಂದ ಹೊರಗೆ ಇದ್ದುದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಪ್ರಭಾಕರ ಭಟ್, ಕಮಲಾಪ್ರಭಾಕರ ಭಟ್, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್,ಮಾಜಿ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಬಾಳ್ತಿ ಗ್ರಾ.ಪಂ.ಅಧ್ಯಕ್ಷ ವಿಠಲ ನಾೈಕ್, ಉಪಾಧ್ಯಕ್ಷೆ ಪೂರ್ಣಿಮಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪಾ, ಮಾಜಿ ಅಧ್ಯಕ್ಷ ಸುಂದರ ಸಾಲ್ಯಾನ್ ಮತ್ತಿತರರು ಬೇಟಿ ನೀಡಿದ್ದಾರೆ. ಸುದ್ದಿತಿಳಿದಾಕ್ಷಣ ಬಂಟ್ವಾಳ ಅಗ್ನಿಶಾಮಕದಳದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಬಂಟ್ವಾಳ ವೃತ್ತನಿರೀಕ್ಷಕ ಬಿ.ಕೆ.ಮಂಜಯ್ಯ, ನಗರ ಠಾಣಾಧಿಕಾರಿ ನಂದಕುಮಾರ್ ಮತ್ತು ಸಿಬ್ಬಂದಿಗಳು ಸಥಳಪರಿಶೀಲನೆ ನಡೆಸಿದ್ದಾರೆ.


