ಮೂಡುಬಿದಿರೆ: ಪತ್ರಿಕೋದ್ಯಮ ಎಂಬುದು ಜ್ಞಾನದ ಕ್ಷೇತ್ರ. ಜ್ಞಾನವನ್ನು ಗಳಿಸುವುದು ಹಾಗೂ ಅದನ್ನು ಶ್ರೀಸಾಮಾನ್ಯನಿಗೆ ತಲುಪಿಸುವುದು ಪರ್ತಕರ್ತನ ಕೆಲಸ. ಜ್ಞಾನ ಪ್ರಸರಣದ ಸಮಯದಲ್ಲಿಯೇ ಸಮಾಜದ ನೋವಿಗೆ ಸ್ಪಂದಿಸುವುದು ಹಾಗೂ ಸಾಮಾಜಿಕ ಕಳಕಳಿಯನ್ನು ಮೆರೆಯುವುದು ಮುಖ್ಯ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಮಂಗಳೂರು ವಿಭಾಗದ ಮುಖ್ಯಸ್ಥ ಎಂ. ರಘುರಾಮ್ ಹೇಳಿದರು. ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಪತ್ರಕರ್ತರಾದವರಿಗೆ ಸೂಕ್ಷ್ಮ ಒಳನೋಟಗಳಿರಬೇಕು. ತನ್ನ ಸುತ್ತಮುತ್ತ ಏನಾಗುತ್ತಿದೆ ಎಂಬ ಅರಿವಿನ ಜೊತೆಗೆ ಪರೀಕ್ಷಕ ಬುದ್ಧಿಯಿರಬೇಕು. ಆಗ ಮಾತ್ರ ವ್ಯವಸ್ಥೆಯಲ್ಲಡಗಿರುವ ಲೋಪಗಳನ್ನು ಪತ್ತೆ ಹಚ್ಚಲು, ಅವುಗಳಿಗೆ ಒಂದು ತಾರ್ಕಿಕ ಅಂತ್ಯ ನೀಡಲು ಸಾಧ್ಯ. ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಬರವಣಿಗೆಯ ಶೈಲಿಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. `ಸಂಪಾದಕರಿಗೆ ಪತ್ರ’ ಅಂಕಣ ವಿದ್ಯಾರ್ಥಿಗಳಿಗಿರುವ ಅತೀ ದೊಡ್ಡ ವೇದಿಕೆ. ಗಮನಾರ್ಹ ವಿಷಯಗಳ ಬಗ್ಗೆ ಪತ್ರಗಳನ್ನು ಬರೆಯುವದರಿಂದ ಸಾಮಾಜಿಕ ಕ್ರಾಂತಿಗೆ ವಿದ್ಯಾರ್ಥಿಗಳು ಮುಂದಾಗಬಹುದು ಎಂದರು.

ನಂತರ ಸಂವಾದ ನಡೆಸಿದ ರಘುರಾಮ್ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಪತ್ರಿಕೋದ್ಯಮ ಪದವಿ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ `ಸುದ್ದಿಮನೆ’, `ಆಳ್ವಾಸ್ ಮಿರರ್’ ಹಾಗೂ `ಆಳ್ವಾಸ್ ವಿಶನ್’ ಪ್ರಕಟಣೆಗಳನ್ನು ಇದೇಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಪತ್ರಿಕೋದ್ಯಮ ಕ್ಷೇತ್ರ, ಕಾರ್ಯ ವ್ಯಾಪ್ತಿ, ಪತ್ರಕರ್ತರು ಎದುರಿಸಬಹುದಾದ ಸವಾಲುಗಳು, ಪತ್ರಿಕೋದ್ಯಮ ನೀತಿಸಂಹಿತೆ ಕುರಿತಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಪದವಿ ವಿಭಾಗ ಮುಖ್ಯಸ್ಥೆ ರೇಶ್ಮಾ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ರಾಮ್, ಉಪನ್ಯಾಸಕರಾದ
ಪ್ರಸಾದ್ ಶೆಟ್ಟಿ, ಗೀತಾ ಬಿಳಿನೆಲೆ ಉಪಸ್ಥಿತರಿದ್ದರು.


