ಮೂಡಬಿದ್ರೆ: ತ್ರಾಸಿಯಲ್ಲಿ ಸ್ಕೂಲ್ವ್ಯಾನ್ ಅಪಘಾತದಲ್ಲಿ ೮ ಮಂದಿ ಮುಗ್ಧ ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಫೇಸ್ಬುಕ್ನಲ್ಲಿ ಅಮಾನವೀಯ ಕಮೆಂಟ್ ಹಾಕಿದ ಶಂಕರ್ ಪ್ರಸಾದ್ ಎಂಬುವವರನ್ನು ೭ ದಿನಗಳೊಳಗೆ ಪತ್ತೆಹಚ್ಚಿ, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಕ್ರೈಸ್ತ ಮುಖಂಡ ಅಶ್ವಿನ್ ಪಿರೇರಾ ಎಚ್ಚರಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶಂಕರ್ ಪ್ರಸಾದ್ ಅವರ ಫೇಸ್ಬುಕ್ ಕಮೆಂಟ್ ಬಗ್ಗೆ ಈಗಾಗಲೇ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೇಲಾಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದರು.
ಶಂಕರ್ ಪ್ರಸಾದ್ ಎಂಬುವವರು ಫೇಸ್ಬುಕ್ನಲ್ಲಿ ’ಪೋಯಿನ ಮಾತ ಪೊರ್ಬುಲು ಅತ್ತೇ… ಬುಡ್ಲೆ… ನಂಕ್ ದಾನೆ’ (ಸತ್ತವರೆಲ್ಲಾ ಕ್ರೈಸ್ತರಲ್ಲವೇ, ಬಿಡಿ… ನಮಗೇನು?) ಎಂದು ಕಮೆಂಟ್ ಹಾಕಿದ್ದು, ವಿನಾಕಾರಣ ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಅಪಘಾತದಂತಹ ವಿಚಾರದಲ್ಲಿ ಮುಗ್ಧಮಕ್ಕಳು ಸತ್ತಿರುವಾಗ, ಈ ವಿಚಾರದಲ್ಲೂ ಜಾತಿಗಳ ಮಧ್ಯೆ ಅಶಾಂತಿ ಸೃಷ್ಟಿಸುವ ವಿಕೃತ ಕೆಲಸ ಮಾಡಿರುವ ಶಂಕರ್ ಪ್ರಸಾದ್ ಮಾನವ ಜನಾಂಗಕ್ಕೇ ಕಳಂಕ’ ಎಂದರು.
ಶಂಕರ್ ಪ್ರಸಾದ್ ಅವರ ಪೈಶಾಚಿಕ ಕೃತ್ಯವನ್ನು ಉಗ್ರವಾಗಿ ಖಂಡಿಸಿದ ಅಶ್ವಿನ್ ಪಿರೇರಾ ಅವರು ಶಂಕರ್ ಪ್ರಸಾದ್ ತಾನು ಮಾಡಿರುವ ತಪ್ಪಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ಸಂದೇಶಗಳನ್ನು ಹರಿಯಬಿಟ್ಟು ಆನಂದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕ್ರೈಸ್ತ ಬಾಂಧವರಲ್ಲದೆ ಯಾವುದೇ ಜಾತಿ ಬಾಂಧವರಿಗೆ ಇಂತಹ ದುಖಃದ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಈ ರೀತಿ ನೋಯಿಸುವುದು ಅಮಾನವೀಯ ಮತ್ತು ಹ್ಯೇಯ ಕೃತ್ಯ. ಶಂಕರ್ ಪ್ರಸಾದ್ ವಿರುದ್ಧ ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಿ ಮೃತ ಮುಗ್ಧ ಮಕ್ಕಳ ಆತ್ಮಕ್ಕೆ ಚಿರಶಾಂತಿ ಸಿಗುವಂತೆ ಹಾಗೂ ಅವರ ಕುಟುಂಬಸ್ಥರಿಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.
ಜಿಲ್ಲೆಯಾದ್ಯಂತ ಶಾಲಾ ವಾಹನಗಳ ತಪಾಸಣೆ ನಡೆಯುತ್ತಿದ್ದರೂ, ಮೂಡುಬಿದಿರೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲದೆ ಇರುವುದು ವಿಷಾದನೀಯ. ಪೊಲೀಸರು ಮಾತ್ರವಲ್ಲದೆ ಪೋಷಕರೂ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರವಾಗಿ ಚಿಂತರಿಸಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕ್ರೈಸ್ತ ಮುಖಂಡರಾದ ಹೊಸಬೆಟ್ಟು ಗ್ರಾ.ಪಂ. ಅಧ್ಯಕ್ಷ ಮನೋಜ್ ಅಲ್ವಾರಿಸ್, ಮಾಜಿ ಸದಸ್ಯ ಜೆರಾಲ್ಡ್ ಮೆಂಡಿಸ್ ಉಪಸ್ಥಿತರಿದ್ದರು.
