ಕೊಂಕಣಿ ಜಾಗೃತಿ ಅಭಿಯಾನ ಸಮಾರೋಪದಲ್ಲಿ ಜೆ. ಆರ್. ಲೋಬೊ
ಇಂದು ಕರ್ನಾಟಕದ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕಲಿಸಲ್ಪಡುವ ಕೊಂಕಣಿಯು ಹೆಚ್ಚು ಅಂಕಗಳನ್ನು ಪಡೆಯಲು ಸಹಕಾರಿಯಾಗಿದೆ. ಕೊಂಕಣಿಯಲ್ಲಿ ಐಎಎಸ್ ಪರೀಕ್ಷೆಯನ್ನೂ ಬರೆಯುವ ಅವಕಾಶ ಇಂದು ನಮಗಿದೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಕೊಂಕಣಿ ಕಲಿತರೆ ಅದು ಅನ್ನದ ಭಾಷೆಯಾಗಿ ಬೆಳೆಯಬಲ್ಲುದು. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಜೆ. ಆರ್. ಲೋಬೊ ಹೇಳಿದರು. ಅವರು ಇಂದು ಸಂತ ಎಲೋಶಿಯಸ್ ಪ್ರೌಢಶಾಲೆಯಲ್ಲಿ ನಡೆದ, ಕೊಂಕಣಿ ಅಕಾಡೆಮಿಯು ಉಭಯ ಜಿಲ್ಲೆಗಳಲ್ಲಿ ಆಯೋಜಿಸಿದ 15 ದಿನಗಳ ಕೊಂಕಣಿ ಜಾಗೃತಿ ಅಭಿಯಾನದ ಸಮಾರೋಪದಲ್ಲಿ ಮಾತನಾಡುತ್ತಿದ್ದರು.
ಪ್ರಸ್ತಾವನೆಗೈದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಈ ಜಾಗೃತಿ ಅಭಿಯಾನವು ಎರಡು ಹಂತಗಳಲ್ಲಿ ೨೫ ದಿನಗಳಲ್ಲಿ ನಡೆದಿದ್ದು, ಮೊದಲ ಹಂತದಲ್ಲಿ ಉತ್ತರ ಕನ್ನಡದ 100 ಶಾಲೆಗಳಿಗೆ ಭೇಟಿ ನೀಡಲಾಗಿತ್ತು. ಈಗ ದಕ್ಷಿಣ ಕನ್ನಡದ 128 ಶಾಲಾ ಕಾಲೇಜುಗಳು ಹಾಗೂ ಉಡುಪಿಯ 39 ಶಾಲಾ ಕಾಲೇಜುಗಳಿಗೆ ಭೇಟಿ ನೀಡಲಾಗಿದೆ. ಒಟ್ಟು 267 ಶಾಲೆಗಳಿಗೆ ಭೇಟಿ ನೀಡಲಾಗಿದೆ. ಉತ್ತರ ಕನ್ನಡದ ೪೫ ಹೊಸ ಶಾಲೆಗಳು ಕೊಂಕಣಿ ಕಲಿಸಲು ಮುಂದೆ ಬಂದಿವೆ. ಮುಂದಿನ ವಾರದಲ್ಲಿ ಉಭಯ ಜಿಲ್ಲೆಗಳ ಕೊಂಕಣಿ ಕಲಿಸುವ ಶಾಲೆಗಳ ಸ್ಥಿತಿಗತಿ ಸ್ಪಷ್ಟವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂತ ಎಲೋಶಿಯಸ್ ವಿದ್ಯಾ ಸಂಸ್ಥೆಯ ಅಂಗಗಳಾದ ಕಾಲೇಜು, ಪ್ರಾಥಮಿಕ, ಪ್ರೌಢ ಮತ್ತು ಗೊನ್ಸಾಗಾ ಶಾಲೆಗಳಿಗೆ ಕೊಂಕಣಿ ಬಾವುಟ ಮತ್ತು ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಸಂಸ್ಥೆಯ ರೆಕ್ಟರ್ ಫಾ. ಡಯಾನ್ ವಾಜ್ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಫಾ. ಎಡ್ವರ್ಡ್ ರೊಡ್ರಿಗಸ್ ಶುಭ ಹಾರೈಸಿ ಕೊಂಕಣಿ ಕಲಿಕೆಗೆ ಸಹಕರಿಸುವ ಭರವಸೆ ನೀಡಿದರು. ಕೊಂಕಣಿ ಜಾಗೃತಿ ಅಭಿಯಾನದಲ್ಲಿ ಸಹಕರಿಸಿದ ಸದಸ್ಯರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ, ಅಕಾಡೆಮಿ ಸದಸ್ಯರಾದ ಲಾರೆನ್ಸ್ ಡಿಸೋಜ, ಲುಲ್ಲುಸ್ ಕುಟಿನ್ಹಾ, ಅರವಿಂದ ಶ್ಯಾನಭಾಗ, ಶೇಖರ ಗೌಡ ಮತ್ತು ದೇವದಾಸ ಪೈ ಉಪಸ್ಥಿತರಿದ್ದರು.
ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್ ಡಾ ಬಿ. ದೇವದಾಸ ಪೈ ಧನ್ಯವಾದವತ್ತರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು. ಈ ಅಭಿಯಾನ ಯೋಜನೆಗೆ ಕೊಂಕಣಿ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕೊಂಕಣಿ ಪ್ರಚಾರ ಸಂಚಾಲನವು ಸಹಕಾರ ನೀಡಿತ್ತು.











