ಬಂಟ್ವಾಳ:ತಾಲ್ಲೂಕಿನ ಹಲವೆಡೆ ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮನೆ ಮತ್ತು ಅಡಿಕೆ ಮತ್ತಿತರ ಕೃಷಿಗೆ ಹಾನಿಗೀಡಾದ ನರಿಕೊಂಬು, ಶಂಭೂರು ,ಬಾಳ್ತಿಲ, ಸಜಿಪಮುನ್ನೂರು, ಮಂಚಿ ಗ್ರಾಮದ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುರುವಾರ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.
ನರಿಕೊಂಬು ಗ್ರಾಮದ ಕೇದಿಗೆ ಚೆನ್ನಪ್ಪ ಪೂಜಾರಿ ಮನೆಗೆ ಭೇಟಿ ನೀಡಿ ಇಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಇಲ್ಲಿನ ಮುರಿದು ಬಿದ್ದ ತೆಂಗು, ಅಡಿಕೆ, ಬಾಳೆ ಕೃಷಿ ವೀಕ್ಷಣೆ ನಡೆಸಿದರು. ನರಿಕೊಂಬು ಗ್ರಾಮದ ಅಂತರ ಅರುಣ್ ಶೆಟ್ಟಿ ಅವರ ಅಡಿಕೆ ತೋಟ, ಮೊಗರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ವಿದ್ಯುತ್ ತಂತಿ ಮೇಲೆ ಬಿದ್ದಿರುವ ಮರದ ಕೊಂಬೆ ತೆರವುಗೊಳಿಸುತ್ತಿದ್ದ ಮೆಸ್ಕಾಂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ನರಿಕೊಂಬು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಷ್ಟ ಅಂದಾಜಿಸಲು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತಿತರ ಕಂದಾಯ ಇಲಾಖೆ ಅಧಿಕಾರಿಗಳೊಮದಿಗೆ ಸಭೆ ನಡೆಸುವುದಾಗಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಸಾಮಾಜಿಕ ಸೇವಾಕರ್ತ ಎನ್.ಪ್ರಕಾಶ ಕಾರಂತ, ಗ್ರಾಮ ಪಂಚಾಯಿತಿ ಸದಸ್ಯರಾದ ರವೀಂದ್ರ ಸಪಲ್ಯ, ವಿಶ್ವನಾಥ ಪೂಜಾರಿ, ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಮಾಜಿ ಸದಸ್ಯ ಆಲ್ಬರ್ಟ್ ಮಿನೇಜಸ್, ವಿವಿಧ ಇಲಾಖಾಧಿಕಾರಿಗಳು ಇದ್ದರು.
—
