ಬಂಟ್ವಾಳ; ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ಆಯೋಗ ಜಂಟಿಯಾಗಿ ಈ ವರ್ಷ ಜಾರಿಗೆ ತಂದ ನಮ್ಮ ನಡೆ ಶಾಲೆ ಕಡೆ ವಿಶೇಷ ದಾಖಲಾತಿ ಆಂದೋಲನಕ್ಕೆ ತಾಲೂಕಿನ ಕಾವಳ ಮೂಡೂರು ಗ್ರಾಮದ ಕೆದ್ದಳಿಕೆ ಹಿ.ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿಯವರು ಚಾಲನೆ ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ರಮೇಶ್ ನಾಯಕ್ ಅವರು, ಶಾಲೆಯಿಂದ ಹೊರಗುಳಿದ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸುವುದು, ಹಾಗೂ ಶಾಲಾ ವ್ಯಾಪ್ತಿಯ 5 ವರ್ಷ ಮೇಲ್ಪಟ್ಟ ಮಕ್ಕಳನ್ನು ಶಾಲೆಗೆ ದಾಖಲಿಸುವುದು ಈ ವಿಶೇಷ ಆಂದೋಲನದ ಮುಖ್ಯ ಉದ್ದೇಶವಾಗಿದ್ದು, ಆಯಾ ಶಾಲಾ ವ್ಯಾಪ್ತಿಯ ಸಂಘಸಂಸ್ಥೆಗಳು, ಪ್ರಜ್ಞಾವಂತ ನಾಗರೀಕರು ಈ ಕಾರ್ಯದಲ್ಲಿ ಸಹಭಾಗಿಗಳಾದರೆ ಯಶಸ್ಸು ಸಾಧ್ಯ , ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆಂದೋಲನಕ್ಕೆ ಚಾಲನೆಯ ಜೊತೆಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಉದ್ಘಾಟನೆಯ ಬಳಿಕ ಜಾಥಾದ ಮೂಲಕ ಶಾಲಾ ವ್ಯಾಪ್ತಿಯ ಮನೆಮನೆಗಳಿಗೆ ತೆರಳಿದ ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು, ಮಕ್ಕಳ ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮಕ್ಕಳ ಶಾಲಾ ಸೇರ್ಪಡೆ ಕುರಿತು ಜಾಗೃತಿ ಮೂಡಿಸಿದರು. ಎಸ್ಡಿಎಂಸಿ ಉಪಾಧ್ಯಕ್ಷೆ ಚಂದ್ರಾವತಿ, ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.


