ಬಂಟ್ವಾಳ: ಜಿಲ್ಲೆ ಹಾಗೂ ರಾಜ್ಯ ಎದುರಿಸುತ್ತಿರುವ ನೀರ ಬರವನ್ನು ನೀಗಿಸುವಂತೆ ಸೃಷ್ಟಿಕರ್ತ ಪ್ರಭುವನ್ನು ಕೋರಿಕೊಳ್ಳಲು ಬೋಳಂಗಡಿ ಹವ್ವಾ ಜುಮಾ ಮಸೀದಿಯ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸಾಮೂಹಿಕ ನಮಾಝ್ ಹಾಗೂ ಪ್ರಾರ್ಥನೆಯು ಮೇ.8 ರ ಭಾನುವಾರ ಪೂರ್ವಾಹ್ನ 7 ಗಂಟೆಗೆ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಬಿ.ಮಹಮ್ಮದ್ ತಿಳಿಸಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರ, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅವಿಧೇಯತೆ, ವ್ಯಭಿಚಾರಗಳು ಪ್ರಭುವಿನ ಕ್ರೋಧಕ್ಕೆ ಕಾರಣಗಳಾಗಿದ್ದು, ಜನರು ಅಲ್ಲಾಹನಲ್ಲಿ ಪ್ರಯಾಯಶ್ಚಿತ್ಯ ಮತ್ತು ಕ್ಷಮಾಯಾಚನೆ ಮಾಡಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಬಾಂಧವರೆಲ್ಲರೂ ಜೊತೆಯಾಗಿ ಬೋಳಂಗಡಿ ಹವ್ವಾ ಜುಮಾ ಮಸೀದಿಯಲ್ಲಿ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಞಳ್ ಮದನಿಯವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಮುಸ್ಲಿಂಬಾಂಧವರು ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. ಮಹಿಳೆಯರಿಗೂ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಸೀದಿ ಆಡಳಿತ ಮಂಡಳಿ ಸದಸ್ಯರಾದ ಮುಕ್ತಾರ್ ಅಹ್ಮದ್ ಪಾಣೆಮಂಗಳೂರು, ಇಬ್ರಾಹಿಂ ಚೆಂಡಾಡಿ, ಮುಷ್ತಾಫಾ ಎಂ.ಎಚ್ ಉಪಸ್ಥಿತರಿದ್ದರು
