ಮೂಡುಬಿದರೆ: ಪುತ್ತಿಗೆ ಶಿರ್ತಾಡಿ ಜಿ.ಪಂ ಕ್ಷೇತ್ರ, ಮೂಡುಬಿದರೆ ಹೋಬಳಿಯ 4 ತಾ.ಪಂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಮೂಡುಬಿದರೆಯಲ್ಲಿ ಬಿಜೆಪಿ ವಿಜಯೋತ್ಸವ ನಡೆಯಿತು.
ಪುತ್ತಿಗೆ, ಶಿರ್ತಾಡಿ ಜಿ. ಪಂ ಹಾಗೂ ನೆಲ್ಲಿಕಾರು, ಪಾಲಡ್ಕ, ಬೆಳುವಾಯಿ, ಶಿರ್ತಾಡಿ ತಾ. ಪಂ ಕ್ಷೇತ್ರಗಳಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳೊಂದಿಗೆ ನೂರಾರು ಕಾರ್ಯಕರ್ತರು ಪಾಲ್ಗೊಂಡರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪುತ್ತಿಗೆ ಜಿ. ಪಂ ಸದಸ್ಯ ಸುಚರಿತ ಶೆಟಿ, ಮೂಡುಬಿದರೆ ವಿಧಾನಸಭಾ ಕ್ಷೇತ್ರದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ. ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟ, ನಾಯಕರ ಸಹಕಾರದಿಂದ ಗೆಲುವು ಸಾಧ್ಯವಾಗಿದೆ. ಕೇಂದ್ರದ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಲು ಪ್ರಯತ್ನಿಸುತ್ತೇವೆ ಎಂದರು.
ಶಿರ್ತಾಡಿ ಕ್ಷೇತ್ರದ ವಿಜೇತ ಅಭ್ಯರ್ಥಿ ಸುಜಾತ ಕೆ.ಪಿ, ತಾ. ಪಂ ವಿಜೇತ ಅಭ್ಯರ್ಥಿಗಳಾದ ರೇಖಾ ಸಾಲ್ಯಾನ್ ನೆಲ್ಲಿಕಾರು, ನಾಗವೇಣಿ ಶಿರ್ತಾಡಿ, ಸಂತೋಷ್ ಬೆಳುವಾಯಿ, ವನಿತಾ ನಾಯ್ಕ್ ಪಾಲಡ್ಕ, ಬಿಜೆಪಿ ಮುಖಂಡರಾದ ಕೃಷ್ಣರಾಜ ಹೆಗ್ಡೆ, ಭುವನಾಭಿರಾಮ ಉಡುಪ, ಸುದರ್ಶನ್ ಎಂ, ದೇವಿ ಪ್ರಸಾದ್ ಪುನರೂರು, ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
