ಮೂಡುಬಿದರೆ: ನೆಲ್ಲಿಕಾರು ಗ್ರಾ.ಪಂ ವ್ಯಾಪ್ತಿಯ ಪೆರ್ನೋಡಿಯಿಂದ ಫೆ.11ರಂದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ನೇಣು ಬಿಗಿದು ಸ್ಥಿತಿಯಲ್ಲಿ ಮಂಗಳವಾರ (ಫೆ.16)ದಂದು ಸಂಜೆ ಮನೆಯ ಸಮೀಪದ ಪಣಂಬೇರಿ ರಕ್ಷಿತಾರಣ್ಯದಲ್ಲಿ ಪತ್ತೆಯಾಗಿದೆ.

ಪತ್ತೆಯಾಗಿರುವ ಮೃತದೇಹವು ಕರಿಯ ಕೊರಗ (45) ಎಂಬವರದ್ದಾಗಿದೆ. ಅವರು ಕಟ್ಟಿಗೆ ಸಂಗ್ರಹಿಸಲೆಂದು ಕಾಡಿಗೆ ಹೋದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಕರಿಯ ಅವರ ಸಹೋದರಿ ಮಾದು ಎಂಬವರು ಫೆ.15ರಂದು ಮೂಡುಬಿದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಂಗಳವಾರದಂದು ಮಾದು ಮತ್ತು ಅವರ ಗಂಡ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದಾಗ ಕರಂಬಾರು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಕೊಳೆತು ವಾಸನೆ ಬೀರುತ್ತಿರುವುದು ಅವರ ಗಮನಕ್ಕೆ ಬಂದಿದೆ. ಕುಡಿತದ ಚಟವನ್ನು ಹೊಂದಿದ್ದ ಕರಿಯ ಅವರಿಗೆ ಪತ್ನಿ, ಪುತ್ರ ಇದ್ದಾರೆ.
ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
