ಮೂಡುಬಿದರೆ: ಮೂಡುಬಿದರೆ-ಮೂಲ್ಕಿ ಕ್ಷೇತ್ರದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯು ಮಂಗಳವಾರ ಸಮಾಜ ಮಂದಿರ ಸಭಾದಲ್ಲಿ ನಡೆಯಿತು.
ಬಿಜೆಪಿ ಕೆಲ ಕಾರ್ಯಕರ್ತರು ಪುತ್ತಿಗೆ ಜಿ.ಪಂ ಟಿಕೆಟ್ ಹಂಚಿಕೆಯ ವಿಷ ಪ್ರಸ್ತಾಪಿಸಿದ್ದು, ರಂಚಿತ್ ಪೂಜಾರಿಯವರಿಗೆ ಟಿಕೆಟ್ ನೀಡದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡೆ ಸುಲೋಚನಾ ಭಟ್, ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರ ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು. ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಸಮಜಾಯಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಜಿ.ಕೆ ಸುಲೋಚನಾ ಭಟ್ ಚುನಾವಣಾ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಉಪಾಧ್ಯಕ್ಷರುಗಳಾದ ಭುವನಾಭಿರಾಮ ಉಡುಪ. ಕೆ.ಪಿ ಜಗದೀಶ್ ಅಧಿಕಾರಿ, ಜಿ.ಪಂ ಅಭ್ಯರ್ಥಿಗಳಾದ ಕೆ.ಪಿ ಸುಚರಿತ ಶೆಟ್ಟಿ, ಕಸ್ತೂರಿ ಪಂಜ, ಜಿ.ಪಂ ಮಾಜಿ ಸದಸ್ಯ ಈಶ್ವರ ಕಟೀಲ್, ನಿರ್ವಹಣಾ ಸಮಿತಿಯ ಸುದರ್ಶನ ಎಂ, ದಿವ್ಯವರ್ಮ ಬಲ್ಲಾಳ್, ಪ್ರಸಾದ್ ಭಂಡಾರಿ ಮತ್ತು ಗೋಪಾಲ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
