ಮಂಗಳೂರು: ಶಿಪ್ಪಿಂಗ್ ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಶ್ರೀಕಾಂತ್ ಕೋತ್ ಎಂಬವರ ಪುತ್ರ ರುತುರಾಜ್ ಶ್ರೀಕಾಂತ್ ಕೋತ್ ಯಾನೆ ಲಲ್ಯ ಯಾನೆ ರುತ್ (20) ಎಂಬಾತ ಬಂಧಿತ ಆರೋಪಿ.
ಮಾ.3ರಂದು ಬಂಗ್ರಕೂಳೂರು ವಿಕೆ ಟವರ್ಸ್ ಕಟ್ಟಡದಲ್ಲಿ ಉದ್ಯಮಿ ಅಹಮ್ಮದ್ ಮೊಯ್ದೀನ್ ಎಂಬವರ ಮಾಲೀಕತ್ವದ ಡೆಲ್ಟಾ ಇನ್ಫ್ರಾ ಲಾಜಿಸ್ಟಿಕ್ (ವರ್ಲ್ಡ್ವೈಡ್ ) ಲಿಮಿಟೆಡ್ ಎಂಬ ಸಂಸ್ಥೆಯ ಕಚೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸೂಚನೆಯಂತೆ, ಈತ ಅಕ್ರಮ ಪ್ರವೇಶ ಮಾಡಿ ಜೀವಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಮಹಾರಾಷ್ಟ್ರ ಕರಾಡ್ನ ಮಲ್ಕಾಪುರ ಎಂಬಲ್ಲಿಂದ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಈತ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಮುಂಬಯಿಯಲ್ಲಿ ಗಣೇಶ್ ಲಕ್ಷ್ಮಣ ಸಾಕೇತ್ ಮತ್ತು ಮುಖೇಶ್ ಶಿವಾಜಿ ಕಾಂಬ್ಳೆ, ಕಮಾಲ್ ಸಿಂಗ್ ರಜಪೂತ್ ಹಾಗೂ ದತ್ತಾತ್ರೆಯ ತುಕರಾಂ ವಾಗ್ರೆ ಎಂಬವರನ್ನು ಬಂಧಿಸಿ, ಅವರಿಂದ ಒಂದು ಪಿಸ್ತೂಲ್, 3 ರೌಂಡ್ಸ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೈ ಆನೆಗುಂಡಿ ರಸ್ತೆ ಸಮೀಪದ ಭಾರತಿ ಬಿಲ್ಡರ್ಸ್ ಕಚೇರಿಗೆ ಬಂದು ಗುಂಡು ಹಾರಿಸಿ ಬೆದರಿಸಿದವರಾಗಿದ್ದಾರೆ. ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಜಗದೀಶ್ ಮತ್ತು ಅಪರಾಧ ವಿಭಾಗದ ಡಿಸಿಪಿ ವಿಷ್ಣುವರ್ಧನ ಎನ್. ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್ಐ ಶ್ಯಾಮ್ಸುಂದರ್ ಮತ್ತು ಸಿಬ್ಬಂದಿಗಳಾದ ಶಶಿಧರ ಶೆಟ್ಟಿ ಜಮ್ಮದಮನೆ, ಗಣೇಶ್ ಎಂ.ಪಿ., ಗಣೇಶ್ ಕಲ್ಲಡ್ಕ, ವೇಣುಗೋಪಾಲ ಅಮೈ, ಚಂದ್ರಶೇಖರ, ದಿನೇಶ್ ಬೇಕಲ್, ಮಣಿ ಎಂ.ಎನ್., ಸುಧೀರ್, ಜಬ್ಬಾರ್, ರಾಜೇಂದ್ರ ಪ್ರಸಾದ್ ಮತ್ತು ತೇಜ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
