ಧಾರ್ಮಿಕತೆಯಿಂದ ಸಂಸ್ಕಾರ ಲಭ್ಯ: ವಿನ್ಸೆಂಟ್ ಪಾಯಸ್
ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಪರಸ್ಪರ ಸೌಹಾರ್ದತೆಯಿಂದ ನಡೆಸುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ದುಶ್ಚಟಗಳು ದೂರವಾಗಿ ಸಂಸ್ಕಾರಯುತ ಸಮಾಜ ನಿರ್ಮಿಸಲು ಸಾಧ್ಯವಿದೆ. ಇದಕ್ಕಾಗಿ ಯುವಜನತೆ ಸಂಘಟಿತರಾಗಿ ಪಾಶ್ಚಾತ್ಯ ಸಂಸ್ಕøತಿಗಳಿಂದ ದೂರ ಸರಿದು ದುಶ್ಚಟಗಳ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿನ್ಸೆಂಟ್ ಪಾಯಸ್ ಹೇಳಿದ್ದಾರೆ.
ತಾಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಪೇಲು ತುಳುನಾಡ ಯುವಕ ಸಂಘ ಮತ್ತು ವಿಶ್ವಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಈಚೆಗೆ ನಡೆದ 21ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶನಿಪೂಜೆ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಸಂಘಟನೆಗಳ ಮೂಲಕ ನಡೆಸುವ ಸಮಾಜ ಸೇವೆಯಿಂದ ಮಾನಸಿಕ ನೆಮ್ಮದಿ ಜೊತೆಗೆ ಪರಸ್ಪರ ಪ್ರೀತಿ ಮತ್ತು ವಿಶ್ವಾಸ ವೃದ್ಧಿಸುತ್ತದೆ ಎಂದರು.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಸಿದ್ಧಕಟ್ಟೆ ಅನಂತ ಪದ್ಮ ಹೆಲ್ತ್ ಸೆಂಟರ್ ಮುಖ್ಯಸ್ಥ ಡಾ.ಸುದೀಪ್ ಕುಮಾರ್, ಎಲ್ಪೇಲು ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಜೈನ್, ಮುಂಬೈ ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಡಾಕ್ಟರೇಟ್ ಪದವಿ ಪುರಸ್ಕ್ರತ ಉದ್ಯಮಿ ವರದರಾಜ ಪೈ ಮಾವಿನಕಟ್ಟೆ ಮತ್ತು ರ್ಯಾಂಕ್ ವಿಜೇತೆ ನಳಿನಾಕ್ಷಿ ಎಂ.ಪೂಜಾರಿ ಕೊಂಡಬೆಟ್ಟು ಇವರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೀಶ ಆಚಾರ್ಯ ಎಲ್ಪೇಲು, ಲಿಂಗಪ್ಪ ಪೂಜಾರಿ ಹಲಾಯಿ, ಸುಜಾತ ರಾಜು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಾಜೇಂದ್ರ ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪದಾಧಿಕಾರಿಗಳಾದ ಜಗಧೀಶ ಗೌಡ ವರದಿ ವಾಚಿಸಿದರು. ಯೋಗೇಶ ಆಚಾರ್ಯ ವಂದಿಸಿ, ರತ್ನಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
