ಬಂಟ್ವಾಳ: ಹಣ ಸಂಪಾದಿಸುವುದೇ ಜೀವನದ ಉದ್ದೇಶವಾಗಬಾರದು ಬದಲಾಗಿ ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡಿದಾಗ ಗ್ಯಾರೇಜ್ ನಂ ತಹ ಉದ್ದಿಮೆಗಳು ಕೂಡ ಹೆಚ್ಚು ಎತ್ತರಕ್ಕೇರಲು ಸಾಧ್ಯವಿದೆ ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಪಿ. ಹೇಳಿದರು.
ದ.ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾಮಂದಿರದಲ್ಲಿ ನಡೆದ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಹಳಲ್ಲಿ ಗ್ಯಾರೇಜ್ ಸಿಬ್ಬಂದಿಗಳು ಉತ್ತಮವಾದ ಸೇವೆಯನ್ನು ನೀಡುತ್ತಾರೆ. ಇಂತಹ ಸೇವೆ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಸಿಗಲು ಸಾಧ್ಯವಿಲ್ಲ. ಗ್ಯಾರೇಜು ನೌಕರರು ತಮ್ಮ ಸಂಘಟನೆಗಳನ್ನು ಕಟ್ಟಿಕೊಂಡು ಸಮಾಜಮುಖಿ ಸೇವೆಗಳನ್ನು ನೀಡುತ್ತಿರುವುದು ಅಭಿನಂದನೀಯ ಎಂದರು. ವಾಹನ ಚಾಲನೆಯ ವೇಳೆ ಅನುಸರಿಸಬೇಕಾದ ಸುರಕ್ಷ ಕ್ರಮಗಳು, ಸಂಚಾರಿ ನಿಯಮಗಳ ಬಗ್ಗೆ ಅವರು ತಿಳಿಸಿದರು.
ಬಂಟ್ವಾಳ ವಲಯದ ಅಧ್ಯಕ್ಷ ಸುಧಾಕರ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ನಿರೀಕ್ಷಕಿ ಮರ್ಲಿನ್ ಗ್ರೇಸಿಯಾ ಡಿಸೋಜಾ, ದ.ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಪುರುಷೋತ್ತಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರಮಜೀವಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಬಂಟ್ವಾಳ ಟ್ರಾಫಿಕ್ ಎಸೈ ಚಂದ್ರಶೇಖರಯ್ಯ, ಮಾಜಿ ಅಧ್ಯಕ್ಷ ಸಂಜೀವ ಬಂಜನ್, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಪುಂಡಲೀಕ ಸುವರ್ಣ, ಹಿರಿಯ ಮೆಕ್ಯಾನಿಕ್ಗಳಾದ ಶ್ರೀನಿವಾಸ ನಾಯಕ್, ಹಾಗೂ ದಯಾನಂದ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮದ 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 7 ಶಾಲೆಯ 14 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ವಿಶ್ವನಾಥ, ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ ವೇದಿಕೆಯಲ್ಲಿದ್ದರು. ಜೊತೆ ಕಾರ್ಯದರ್ಶಿ ಸುರೇಶ್ ಕುಲಾಲ್ ಸ್ವಾಗತಿಸಿದರು, ಕಾರ್ಯದರ್ಶಿ ರಾಜೇಶ್ ವರದಿ ವಾಚಿಸಿದರು, ಕೋಶಾಧಿಕಾರಿ ಜಗದೀಶ ರೈ ಲೆಕ್ಕಪತ್ರ ಮಂಡಿಸಿದರು, ಉಪಾಧ್ಯಕ್ಷ ಕಿಶೋರ್ ಕುಮಾರ್ ವಂದಿಸಿದರು.


