ಮಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ದೇವಿ ಟ್ರಾವೆಲ್ ಏಜೆನ್ಸಿ ಮಾಲೀಕನಾಗಿದ್ದ ಅನೀಶ್ ಶೆಟ್ಟಿ(40) ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ಅವರು ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಇವರು ಕದ್ರಿ ಪಾರ್ಕ್ ಬಳಿ ಶುಕ್ರವಾರ ಬೆಳಗ್ಗೆ ಅನೀಶ್ ಮೇಲೆ ಹಲ್ಲೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅನೀಶ್ ಶೆಟ್ಟಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಹೇಮಂತ್ ಹಾಗೂ ಸಹಚರರ ಗುಂಪು ಅನೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 40 ವರ್ಷ ವಯಸ್ಸಿನ ಹೋಗೈ ಬಜಾರಿನ ಹೇಮಂತ್ ಎಂಬುವರು ಕದ್ರಿ ಪಾರ್ಕ್ ಬಳಿಯ ಡಿಂಕಿ ಡೈನ್ ಸಮೀಪವಿದ್ದ 34 ವರ್ಷದ ಅನೀಶ್ ಶೆಟ್ಟಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಜನನಿಬಿಡ ಸ್ಥಳದಲ್ಲಿ ಈ ಮಾರಾಮಾರಿ ನಡೆದಿತ್ತು.
ಹಣಕಾಸಿನ ವಿಚಾರದಲ್ಲಿ ಜಗಳ ನಡೆದು ಈ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ. ಅನೀಶ್ ಅವರ ಗೆಳೆಯರೊಬ್ಬರ ಪ್ರಕಾರ, ಬೆಳಗ್ಗೆ ಅನೀಶ್ ಗೆ ಒಂದು ಫೋನ್ ಕರೆ ಬಂದಿದೆ. ಡಿಂಕಿ ಡೈನ್ ಹೋಟೆಲ್ ಬಳಿ ಬನ್ನಿ, ಲ್ಯಾಂಡ್ ಡೀಲಿಂಗ್ ಮಾಡಬೇಕಿದೆ ಎಂದಿದ್ದಾರೆ. ಶಕ್ತಿನಗರ ಜಮೀನು ಮಾರಾಟ ಸಂಬಂಧ ಮಾತುಕತೆ ನಡೆಸಲು ಅನೀಶ್ ಅವರು ತೆರಳಿದ್ದಾರೆ.
ಇದೇ ವೇಳೆ ಗೋರಕ್ಷನಾಥ ಜ್ಞಾನ ಮಂದಿರದ ಬಳಿ ಮಾರುತಿ ಜೆನ್ ಕಾರು ಪಾರ್ಕ್ ಮಾಡಿ ಹೊಂಚು ಹಾಕಿಕೊಂಡು ಹೇಮಂತ್ ಹಾಗೂ ಅವರ ಇಬ್ಬರ ಸ್ನೇಹಿತರು ಕಾದು ಕುಳಿತ್ತಿದ್ದಾರೆ. ಅನೀಶ್ ಅವರು ನಿಗದಿತ ಸ್ಥಳಕ್ಕೆ ಬರುತ್ತಿದ್ದಂತೆ, ಹೇಮಂತ್ ಬಳಿ ಇದ್ದ ಒಬ್ಬ ವ್ಯಕ್ತಿ ಅನೀಶ್ ಬಳಿ ಬಂದು ಕೆಲವು ದಾಖಲೆ ಪತ್ರಗಳನ್ನು ನೀಡಿದ್ದಾನೆ.
ದಾಖಲೆ ಪತ್ರಗಳೆಲ್ಲ ಬೋಗಸ್ ಎಂದು ತಿಳಿದ ಅನೀಶ್ ಡೀಲ್ ಗೆ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ, ಡೀಲ್ ಕುದುರಿಸಿದರೆ ಒಳ್ಳೆ ದುಡ್ಡು ಇಬ್ಬರಿಗೂ ಸಿಗುತ್ತದೆ ಎಂದು ಆ ವ್ಯಕ್ತಿ ಪುಸಲಾಯಿಸತೊಡಗಿದ್ದಾನೆ. ಈ ಸಮಯದಲ್ಲಿ ದಾಖಲೆ ಪತ್ರ ನೋಡುತ್ತಿದ್ದ ಅನೀಶ್ ಮೇಲೆ ಹಿಂದಿನಿಂದ ಹೇಮಂತ್ ಹಾಗೂ ಆತನ ಗೆಳೆಯ ದಾಳಿ ಮಾಡಿದ್ದಾರೆ. ನಾನು ಅನೀಶ್ ಸಹಾಯಕ್ಕೆ ತೆರಳುವಷ್ಟರಲ್ಲಿ ಮೂವರು ಸೇರಿ ಅನೀಶ್ ಗೆ
ಹೊಡೆದು ಜೆನ್ ಕಾರು ಹತ್ತಿ ಪರಾರಿಯಾಗಿದ್ದಾರೆ. ನಂತರ ಅನೀಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ದೇಹ ಪರಿಸ್ಥಿತಿ ಕ್ಷೀಣವಾಗಿದೆ ಎಂದಿದ್ದಾರೆ ಎಂದು ಅನೀಶ್ ಅವರ ಗೆಳೆಯ ವಿವರಿಸಿದ್ದಾರೆ. ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
