ಮೂಡುಬಿದಿರೆ : ಸರಕಾರದ ಸೌಲಭ್ಯಗಳು, ಸವಲತ್ತುಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅರ್ಹರಿಗೆ ಮುಟ್ಟುವಂತೆ ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಸರಕಾರಗಳ ಎಲ್ಲ ಪ್ರಯತ್ನಗಳ ಹೊರತಾಗಿಯೂ ಸೌಲಭ್ಯ, ಸಾಮಾಜಿಕ ನ್ಯಾಯ ವಂಚಿತರು ಇನ್ನೂ ದೊಡ್ಡ ಸಂಖ್ಯೆಯಲ್ಲಿ ಉಳಿದುಕೊಂಡಿದ್ದಾರೆ’ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಡಾ| ಚಿ.ನಾ. ರಾಮು ಅಭಿಪ್ರಾಯಪಟ್ಟಿದ್ದಾರೆ.

ಅವರು ನಮ್ಮಬೆದ್ರ ಬಳಗ ಮೂಡುಬಿದಿರೆ, ಹೊಸಸಂಜೆ ಬಳಗ ಕಾರ್ಕಳ, ಕರಾವಳಿ ಫ್ರೆಂಡ್ಸ್ ಸರ್ಕಲ್ ಶಿರ್ತಾಡಿ, ಯಂಗ್ ಸ್ಟಾರ್ ಯೂತ್ ಕ್ಲಬ್ ಮಾಂಟ್ರಾಡಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ (ಎಸ್.ಸಿ., ಹಿಂದುಳಿದ, ಅಲ್ಪಸಂಖ್ಯಾತ) ಕರಾವಳಿ ವಿಭಾಗ ಜಂಟಿ ಆಶ್ರಯದಲ್ಲಿ
ಭಾನುವಾರ ಅಳಿಯೂರಿನ ಭ್ರಮರಶ್ರೀ ಕಲಾ ಮಂಟಪದಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾಗಿ ಕರ್ನಾಟಕದ ಸರಕಾರದಿಂದ ನೇಮಕಗೊಂಡ ಶಿವಾನಂದ ಎಸ್. ಪಾಂಡ್ರು ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಸಮಾಜದಲ್ಲಿ ಮೀಸಲಾತಿಯ ನೆಲೆಯಲ್ಲಿ ಅಧಿಕಾರ, ಸೌಲಭ್ಯ, ಸವಲತ್ತು ಪಡೆದು ಹಲವರು ಸಾಕಷ್ಟು ಉತ್ತಮ ಸ್ಥಿತಿ ತಲುಪಿದ್ದಾರೆ. ಆದರೂ ಮೀಸಲಾತಿಯ ಪ್ರಯೋಜನಗಳನ್ನು ಮತ್ತೆ ಮತ್ತೆ ಪಡೆಯುವಲ್ಲಿ ಪ್ರಯತ್ನ ಮಾಡುತ್ತಾರೆ. ಇದರಿಂದಾಗಿ ಅರ್ಹರಿಗೆ ಅವಕಾಶ ತಪ್ಪುತ್ತದೆ. ಮೀಸಲಾತಿ ಪಡೆದು ಅಭಿವೃದ್ಧಿ ಹೊಂದಿದವರು ಅವಕಾಶ ವಂಚಿತರಿಗಾಗಿ ತ್ಯಾಗ ಮಾಡುವ ಅಗತ್ಯವಿದೆ. ಅಂತಹ ಸ್ಪಂದನೆ ದೊರಕದೆ ಇರುವ ಪರಿಸ್ಥಿತಿಯಲ್ಲಿ ಮೀಸಲಾತಿಯಲ್ಲಿ ತಿದ್ದುಪಡಿ ಅನಿವಾರ್ಯ’ ಎಂದು ಅವರು ಹೇಳಿದರು.
ಕೋಟಿ ಚೆನ್ನಯ ಯುವಶಕ್ತಿ ಅಧ್ಯಕ್ಷ ವಿಶ್ವನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಪದ್ಮಾಕರ ಭಟ್ ಅಭಿನಂದನಾ ಭಾಷಣ ಮಾಡಿದರು. ಶಿರ್ತಾಡಿ ತಾ.ಪಂ. ಸದಸ್ಯ ರುಕ್ಕಯ್ಯ ಪೂಜಾರಿ, ಅ.ಭಾ.ದ.ಕ್ರಿ.ಸ. ಹಿಂದುಳಿದ ವಿಭಾಗ ರಾಜ್ಯ ಸದಸ್ಯ ಎಲಿಮಲೆ ರಾಜೇಶ್ ಭಟ್, ಕಾರ್ಕಳ ಹೊಸಸಂಜೆ ಬಳಗ ಅಧ್ಯಕ್ಷ ಆರ್. ದೇವರಾಯ ಪ್ರಭು, ಮೂಡುಬಿದಿರೆ ಯುವಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ನ್ಯಾಯವಾದಿ ಎ. ಜಯರಾಮ್, ಯಂಗ್ರ್ ಯೂತ್ ಕ್ಲಬ್ ಅಧ್ಯಕ್ಷ ಧನಂಜಯ ಆಳ್ವ, ಮೂಡುಬಿದಿರೆ ನಮ್ಮಬೆದ್ರ ಬಳಗದ ಅಧ್ಯಕ್ಷ ಬಿ.ಕೆ. ಅಶ್ರಫ್, ವಾಲ್ಪಾಡಿ ಗ್ರಾ.ಪಂ. ಸದಸ್ಯ ಲಕ್ಷ್ಮಣ ಸುವರ್ಣ, ವಾಲ್ಪಾಡಿ ಗ್ರಾ.ಪಂ. ಸದಸ್ಯ ಗಣೇಶ್ ಮುಖ್ಯ ಅತಿಥಿಗಳಾಗಿ ಶುಭಹಾರೈಸಿದರು. ಅಭಿನಂದನೆ ಸ್ವೀಕರಿಸಿದ ಶಿವಾನಂದ ಎಸ್. ಪಾಂಡ್ರು ಕೃತಜ್ಞತೆ ಸಲ್ಲಿಸಿದರು.
ರಮಾನಂದ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಹಾರಿಸ್ ಹೊಸ್ಮಾರ್ ಸ್ವಾಗತಿಸಿ, ವಂದಿಸಿದರು.
