ಬಂಟ್ವಾಳ:ಸಮಾಜದಲ್ಲಿ ಲಯನ್ಸ್ ಕ್ಲಬ್ನಂತಹ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆಯು ಯಾವುದೇ ಜಾತಿ-ಧರ್ಮ ಮತ್ತು ಮೇಲು-ಕೀಳು ಎಂಬ ಬೇಧವಿಲ್ಲದೆ ಸೇವೆಯೇ ಪರಮ ಧ್ಯೇಯವಾಗಿಟ್ಟು ನಡೆಸುವ ಸಮಾಜಮುಖಿ ಚಟುವಟಿಕೆಗಳು ನಿಜಕ್ಕೂ ಶ್ರೇಷ್ಟ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ‘ಅಮ್ಮ’ ಪ್ರಾಂತೀಯ ಸಮ್ಮೇಳನ ಪ್ರಯುಕ್ತ ಮೆಲ್ಕಾರ್ನಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಸೇವಾ ಚಟುವಟಿಕೆ ನಿರಂತರವಾಗಿ ನಡೆಯುವ ಅಗತ್ಯವಿದ್ದು, ಮಾಣಿಲ ಕ್ಷೇತ್ರವು ಎಂದಿಗೂ ಇದನ್ನು ಪ್ರೋತ್ಸಾಹಿಸುತ್ತದೆ ಎಂದರು.
ಲಯನ್ಸ್ ಕ್ಲಬ್ನ ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮೆನೇಜ್ಮೆಂಟ್ ಸಂಸ್ಥೆ ಹಾಗೂ ಮಂಗಳೂರು ಕೆಎಂಸಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ಈ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ಒಟ್ಟು ದಾಖಲೆಯ 192 ಮಂದಿ ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿ ಗಮನ ಸೆಳೆದರು.
ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಜಗನ್ನಾಥ ಚೌಟ, ಉದ್ಯಮಿ ಕೆ. ಸಂಜೀವ ಪೂಜಾರಿ ಮೆಲ್ಕಾರ್, ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್, ಕೆಎಂಸಿ ಬ್ಲಡ್ ಬ್ಯಾಂಕ್ನ ನಿರ್ದೇದಶಕ ಡಾ. ಶೃಜಿತ್, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಬಿ. ವಸಂತ ಬಾಳಿಗಾ, ಬಂಟ್ವಾಳ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಜಯಂತ ಶೆಟ್ಟಿ, ಸಂಘಟಕರಾದ ನಾಗೇಶ್ ಕುಮಾರ್, ಚಂದ್ರಕಾಂತ್ ಮತ್ತಿತರರು ಶುಭ ಹಾರೈಸಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎನ್. ಸತೀಶ್ ಕುಡ್ವ, ಕಾರ್ಯದರ್ಶಿ ಕೆ. ಜಗದೀಶ ಯಡಪಡಿತ್ತಾಯ, ಖಜಾಂಚಿ ಸುಧಾಕರ ಆಚಾರ್ಯ, ಪ್ರಾಂತ್ಯ 7ರ ಪ್ರಥಮ ಮಹಿಳೆ ದೇವಿಕಾ ದಾಮೋದರ್, ಲಯನೆಸ್ ಕ್ಲಬ್ ಅಧ್ಯಕ್ಷೆ ಗೀತಾ ಜೆ. ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ.ಯಡಪಡಿತ್ತಾಯ, ಖಜಾಂಚಿ ಜ್ಯೋತಿ ಮಧ್ವರಾಜ್ ಕಲ್ಮಾಡಿ ಮತ್ತಿತರರು ಇದ್ದರು. ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.
