ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಆಳ್ವಾಸ್ ಶಿಲ್ಪಸಿರಿ ಹಾಗೂ ಆಳ್ವಾಸ್ ಚಿತ್ರಸಿರಿ ರಾಜ್ಯಮಟ್ಟದ ಕಲಾಶಿಬಿರದ ಭಾನುವಾರ ಸಂಜೆ ಸಂಪನ್ನಗೊಂಡಿತು. ಬೆಂಗಳೂರಿನ ಹಿರಿಯ ಚಿತ್ರಕಲಾವಿದ ಚಂದ್ರನಾಥ ಆಚಾರ್ಯ ಅವರಿಗೆ ಆಳ್ವಾಸ್ ಚಿತ್ರಸಿರಿ ರಾಜ್ಯಪ್ರಶಸ್ತಿ 2015 ನೀಡಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ಚಂದ್ರನಾಥ ಆಚಾರ್ಯ, ಆಳ್ವಾಸ್ ನುಡಿಸಿರಿಯಲ್ಲಿ ಚಿತ್ರಕಲೆಗೆ ಉನ್ನತ ಸ್ಥಾನ ನೀಡಿರುವುದು ಅಭಿನಂದನಾರ್ಹ. ಕಲ್ಕತಾದ ಕಲಾನಿಕೇತನದ ಮಾದರಿಯಲ್ಲಿ ಕಲಾ ಕೇಂದ್ರವಾಗಲಿ ಮೂಡಿಬರುವ ಎಲ್ಲ ಅವಕಾಶಗಳ ಆಳ್ವಾಸ್ ಸಂಸ್ಥೆಯಲ್ಲಿದೆ ಎಂದರು.

ಬೆಂಗಳೂರು ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್ ಮೂರ್ತಿ ಮುಖ್ಯ ಅತಿಥಿಯಾಗಿದ್ದರು. ಚಿತ್ರಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ಜುಗಲ್ಬಂದಿ ನಡೆಯುತ್ತಿರುವುತ್ತದೆ. ಇಂತಹ ವಾತಾವರಣವನ್ನು ಸೃಷ್ಠಿಸಿರುವುದು ಮೋಹನ ಆಳ್ವರ ಹೆಗ್ಗಳಿಕೆ. ಕಲೆಯನ್ನು ಪೋಷಿಸಿ ದೃಶ್ಯ ಕಲೆ ಪರಂಪರೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಷಯ. ಕಲಾಪ್ರೇಮಿಗಳು ಕಲೆ ಹಾಗೂ ಕಲಾವಿದರನ್ನು ಇಷ್ಟಪಡುತ್ತಾರೆ. ಆದರೆ ಕಲಾವಿದರಿಗೆ ತಮ್ಮ ಕಲೆಯ ಮೇಲೆ ಯಾವ ರೀತಿಯ ಅಭಿಮಾನವಿದೆ ಎನ್ನವುದನ್ನು ಅವಲೋಕಿಸಬೇಕಾಗುತ್ತದೆ. ತಮ್ಮ ಹಕ್ಕುಗಳನ್ನು ಮಾತನಾಡುವ ದೃಶ್ಯ ಕಲಾವಿದರ ಮೊದಲು ತಮಗಿರುವ ಸಾಮಾಜಿಕ ಜವಾಬ್ದಾರಿಯನ್ನು ಅರಿತು, ಮುನ್ನಡೆಯುವುದು ಒಳಿತು. ಸೈದ್ದಾಂತಿಕ ನೆಲೆಯನ್ನು ಸಾಹಿತ್ಯ ಲೋಕ ಮುನ್ನಡೆಸುವ ಮಾದರಿಯಲ್ಲಿ ದೃಶ್ಯ ಕಲೆಯೂ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಕಲೆಯ ಕುರಿತ ಚರ್ಚೆಗೆ ಸೂಕ್ತ ವೇದಿಕೆ ನಿರ್ಮಾಣವಾಗಬೇಕಾಗಿದೆ. ವೈಚಾರಿಕ ನೆಲೆಯಲ್ಲಿ ಸಮಾಲೋಚನೆಗೆ ಆಳ್ವಾಸ್ ಸಂಸ್ಥೆ ಮಾಡುವುದಾದರೆ, ಅಕಾಡೆಮಿ ಪ್ರೋತ್ಸಾಹ ನೀಡುತ್ತದೆ ಎಂದರು.
ಡಾ.ಎಂ ಮೋಹನ ಆಳ್ವ ಸಮಾರಂಭ ಅಧ್ಯಕ್ಷತೆ ವಹಿಸಿ, ಚಿತ್ರಕಲಾವಿದರ ಕುಂಚದಿಂದ ಮೂಡಿಬಂದ ಅಪೂರ್ವ ಕಲಾಕೃತಿಗಳನ್ನು ಆಳ್ವಾಸ್ ಸಂಸ್ಥೆ ಯಾವುದೇ ಕಾರಣಕ್ಕೂ ವ್ಯಾಪಾರೀಕರಣಕ್ಕೆ ಬಳಸಿಕೊಳ್ಳುವುದಿಲ್ಲ. ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿ, ಅವರ ಮನಸ್ಸನ್ನು ಅರಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಅದಾನಿ ಗ್ರೂಪ್ಸ್ ಯುಪಿಸಿಎಲ್ನ ಕಾರ್ಯಾನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ತೆಂಕಮಿಜಾರು ಗ್ರಾ.ಪಂ ಪಿಡಿಒ ಸಾಯೀಶ್ ಚೌಟ ಮುಖ್ಯ ಅತಿಥಯಾಗಿದ್ದರು.
ಚಿತ್ರಕಲಾವಿದರಿಗೆ ಶಿಬಿರದ ಪ್ರಮಾಣ ಪತ್ರ ನೀಡಲಾಯಿತು.
ಕಲಾವಿದ ಗಣೇಶ ಸೋಮಯಾಜಿ ಸ್ವಾಗತಿಸಿದರು. ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಹಾವೇರಿ, ಶಿಲ್ಪ ಕಲಾವಿದ ಆನಂದ ರಾಚಪ್ಪ ಬಿಲಗಿ ಬಾಗಲಕೋಟೆ ಶಿಬಿರದ ಅನುಭಗಳನ್ನು ಹಂಚಿಕೊಂಡರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.
ಎರಡು ಶಿಬಿರದಲ್ಲಿ ಒಟ್ಟು ರಾಜ್ಯದ ವಿವಿಧ ಜಿಲ್ಲೆಗಳ 31 ಕಲಾವಿದರು ಭಾಗವಹಿಸಿದರು.
