ಬಂಟ್ವಾಳ: ಗುರುವಾರ ರಾತ್ರಿ ಮಣಿಹಳ್ಳದಲ್ಲಿ ದುಷ್ಕರ್ಮಿಗಳ ಚೂರಿ ಇರಿತಕ್ಕೆ ಬಲಿಯಾದ ನಾವೂರು ಗ್ರಾಮದ ಹಳೆಗೇಟು ನಿವಾಸಿ ಹರೀಶ್ ಅವರ ಕುಟುಂಬಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ 50 ಸಾವಿರ ರುಪಾಯಿ ಆರ್ಥಿಕ ನೆರವನ್ನು ನೀಡಲಾಯಿತು. ಶನಿವಾರ ಬೆಳಿಗ್ಗೆ ಯುವ ಕಾಂಗ್ರೆಸ್ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೃತ ಹರೀಶ್ ಮನೆಗೆ ಭೇಟಿ ನೀಡಿ ನಗದು ಹಣವನ್ನು ಹಸ್ತಾಂತರಿಸಿ ಯುವ ಕಾಂಗ್ರೆಸ್ ಕುಟುಂಬಕ್ಕೆ ಬೆಂಬಲವಾಗಿ ನಿಂತು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಿಥುನ್ ರೈ ಅಮಾಯಕ ಹರೀಶ್ ದುಷ್ಕರ್ಮಿಗಳಿಗೆ ಬಲಿಯಾಗಿರುವುದು ದುಃಖದ ಸಂಗತಿ. ಅವರ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಂಡಿದ್ದೇವೆ. ಹರೀಶ್ ತಂಗಿಗೆ ಒಳ್ಳೆಯ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಯುವಕಾಂಗ್ರೆಸ್ ಚಿಂತನೆ ನಡೆಸಿದೆ, ಕ್ಯಾನ್ಸರ್ ರೋಗ ಪೀಡಿತ ತಂದೆಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಸಂಪೂರ್ಣ ಚಿಕಿತ್ಸೆ ನೀಡವ ಬಗ್ಗೆಯೂ ಯೋಚಿಸಿದ್ದೇವೆ ಎಂದರು. ಘಟನೆಗೆ ಕಾರಣವಾದ ಯಾವುದೇ ಮತೀಯವಾದ ಶಕ್ತಿಯನ್ನು ಮಟ್ಟಹಾಕಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಬಂಟ್ವಾಳ ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಮುಖರಾದ ಅಜಿತ್ ನೂಜಿ, ಸಿದ್ದೀಕ್ ಗುಡ್ಡೆಯಂಗಡಿ, ಗಿರೀಶ್ ಆಳ್ವ, ನಾವೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಗುಲಾಬಿ ಚಂದಪ್ಪ ನಾಯ್ಕ, ಮಾಜಿ ಅಧ್ಯಕ್ಷ ಬೇಬಿ ಸುವರ್ಣ, ಸದಸ್ಯ ಸುವರ್ಣ ಕುಮಾರ್ ಮತ್ತಿತರರು ಇದ್ದರು.
