ಮೂಡುಬಿದಿರೆ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ ಜಿಲ್ಲಾ ಘಟಕದ ವತಿಯಿಂದ ಮೂಡುಬಿದಿರೆ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಗೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ರವಿಕಿರಣ್ ಪುಣಚ ಅವರು ಮೂಡುಬಿದಿರೆಯ ಪೊನ್ನೆಚ್ಚಾರಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಚಾಲನೆ ನೀಡಿದರು.


ನಂತರ ಮಾತನಾಡಿದ ರವಿಕಿರಣ್ ಅವರು ಆಹಾರ ಸಾರ್ವಭೌಮತೆ ಇಡೀ ದೇಶಕ್ಕಲ್ಲ ಪ್ರತಿ ಜಿಲ್ಲೆಗೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ಅವಿಭಜಿತ ದ.ಕ ಜಿಲ್ಲೆಗೆ ಪಾರಶೇಖರ ಸಮಿತಿಯ ಕಾರ್ಯಕ್ರಮವನ್ನು ನೀಡುವಂತೆ ಸರಕಾರವನ್ನು ಆಗ್ರಹಿಸಿದರು.
ಮೂಡುಬಿದಿರೆ ತಾಲೂಕು ಘೋಷಣೆ ಆಗುವ ಮೊದಲೇ ಇಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಸ್ತಿತ್ವಕ್ಕೆ ಬಂದಿರುವುದು ತಾಲೂಕು ಘೋಷಣೆಗೆ ಮುನ್ಸೂಚನೆ ನೀಡಿದಂತ್ತಾಗಿದ್ದು ಈ ನಿಟ್ಟಿನಲ್ಲಿ ತಾವು ಹೋರಾಟವನ್ನು ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಸನ್ನಿ ಡಿ”ಸೋಜಾ ನೀರುಮಾರ್ಗ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರೈತರು ಸಾವಯವ ಕೃಷಿಯನ್ನು ಮಾಡುವ ಮೂಲಕ ಮಕ್ಕಳಿಗೆ ಉತ್ತಮ ಸಮಾಜವನ್ನು ರೂಪಿಸಲು ಅವಕಾಶ ಮಾಡಿಕೊಡಬೇಕು. ಅಲ್ಲದೆ ಸಾವಯವ ಕೃಷಿಯಿಂದ ಉತ್ತಮ ಲಾಭಾಂಶವೂ ಇದೆ ಎಂದು ಹೇಳಿದ ಅವರು ನೇತ್ರಾವತಿ ತಿರುವು ರಾಜಕೀಯ ಪ್ರೇರಿತ ಹಾಗೂ ಅವೈಜ್ಞಾನಿಕ. ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಬೀಳುವುದರಿಂದ ಅಲ್ಲಿ ನೀರಿದೆ ಎಂದು ನೇತ್ರಾವತಿಯ ನೀರನ್ನು ಕೊಡಗಿನಾಚೆ ನೀಡುವುದಾದರೆ ಕೊಡಗಿನಲ್ಲಿ ಬೀಳುವ ಮಳೆಯ ನೀರನ್ನು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಸರಕಾರ ಕೈಬಿಟ್ಟಿಲ್ಲ. ಬದಲಾಗಿ ಆಸ್ಟ್ರೇಲಿಯಾ ಸರಕಾರ ತಿರಸ್ಕರಿಸಿರುವ ಕಲ್ಲಿದ್ದಲನ್ನು ಕರ್ನಾಟಕ ಸರಕಾರವು ತರಿಸಿ ನಿಡ್ಡೋಡಿ ಯೋಜನೆಗೆ ಬಳಸಲು ಪ್ರಯತ್ನಿಸುತ್ತಿದೆ ಎಂದು ಆತಂಕಕಾರಿಯಾದ ವಿಷಯವನ್ನು ಸನ್ನಿ ಅವರು ಸಭೆಗೆ ತಿಳಿಸಿದರು.
ನೂತನ ಅಧ್ಯಕ್ಷ ಸುರೇಶ್ ಕುಮಾರ್ ಅಧ್ಯಕ್ಷೀಯ ಮಾತುಗಳನ್ನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಕೊಳಂಬೆ,ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ, ವಿನೋದ್ ಪಾದೆಕಲ್ಲು ಬಂಟ್ವಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷರುಗಳಾದ ತಾರನಾಥ ಗೌಡ ಸುಳ್ಯ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಪುತ್ತೂರು, ಇಬ್ರಾಹಿಂ ಖಲೀಲ್ ಬಂಟ್ವಾಳ, ರೋನಿ ಮೆಂಡೋನ್ಸಾ ಮೂಡುಬಿದಿರೆ, ಕೋಶಾಧಿಕಾರಿ ಮಂಜುನಾಥ ರೈ ಪರಾರಿ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಆಲ್ವೀನ್ ಮಿನೇಜಸ್ ಸ್ವಾಗತಿಸಿದರು. ಮಾರ್ಕ್ ಸಿರಿಲ್ ಪಿಂಟೋ ತಾಕೋಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಳೆದ 103 ದಿನಗಳಿಂದ ನಡೆಯುತ್ತಿರುವ ಕಳಸ ಬಂಡೂರಿ ಹೋರಾಟದಲ್ಲಿ ಬಿಜೆಪಿ ಮುಖಂಡರುಗಳು ಭಾಗಿಯಾಗದೆ ತಮ್ಮ ಅಸ್ತಿತ್ವವನ್ನು ಕಳಕೊಂಡಿದ್ದಾರೆ. ಅದಕ್ಕಾಗಿ ದ.ಕ ಜಿಲ್ಲೆಯಲ್ಲಿ ತಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುವ ನಾಟಕವಾಡಿ ಪಾದಯಾತ್ರೆಯನ್ನು ಕೈಗೊಂಡಿದ್ದರು ಎಂದು ವಿಷಾಧವ್ಯಕ್ತ ಪಡಿಸಿದರು.
