ಬಂಟ್ವಾಳ: ತಾಲ್ಲೂಕಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ‘ಎತ್ತಿನಹೊಳೆ ಯೋಜನೆ ನಿಲ್ಲಿಸಿ, ನೇತ್ರಾವತಿ ಉಳಿಸಿ’ ಎಂಬ ಘೋಷಣೆಯೊಂದಿಗೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಡಿ ಶನಿವಾರ ನಡೆದ ಬೆಳಿಗ್ಗೆಯಿಂದ ಸಂಜೆ ತನಕ ನಡೆದ ‘ಮುಖ್ಯಮಂತ್ರಿಗೆ ಅಂಚೆ ಕಾರ್ಡ್ ಚಳವಳಿ’ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ನಾಗರಿಕರು ಸ್ವತಃ ಆಸಕ್ತಿಯಿಂದ ಧಾವಿಸಿ ಅಂಚೆ ಕಾಡರ್ಿಗೆ ಸಹಿ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

‘ಜಿಲ್ಲೆಯ ಜೀವನದಿ ನೇತ್ರಾವತಿ ಉಳಿಸಿ, ಈ ನದಿಯನ್ನು ಅನಾವಶ್ಯಕವಾಗಿ ಬರಡುಗೊಳಿಸಬೇಡಿ, ಅವೈಜ್ಞಾನಿಕ ಎತ್ತಿನ ಹೊಳೆ ಯೋಜನೆ ನಿಲ್ಲಿಸಿ’ ಎಂದು ಆಗ್ರಹಿಸಿ ಪ್ರತಿಯೊಂದು ಅಂಚೆ ಕಾರ್ಡ್ ನಲ್ಲಿಯೂ ಸಂಘಟನೆ ಕಾರ್ಯಕರ್ತರು ಬರೆಯುತ್ತಿದ್ದರು. ಮಾತ್ರವಲ್ಲದೆ ಈ ಕಾರ್ಡ್ ನಲ್ಲಿ ಸಹಿ ಮಾಡಿದವರ ಸ್ವ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಿ ಗಮನ ಸೆಳೆದರು. ಇನ್ನೊಂದೆಡೆ ‘ಎತ್ತಿನ ಹೊಳೆಯೋ…ಬತ್ತಿದ ಸೆಳೆಯೋ…’ ಹಾಡು ಜನರ ಮನ ಸೆಳೆದು ಹೋರಾಟಕ್ಕೆ ಧುಮುಕಲು ಮತ್ತಷ್ಟು ಪ್ರೇರಣೆ ನೀಡುವಂತಿತ್ತು.
ಆರಂಭದಲ್ಲಿ ಅಜಿಲಮೊಗರು ಜುಮ್ಮಾ ಮಸೀದಿ ಖತೀಬ ಅಬ್ದುಲ್ ಹಮೀದ್, ಮೊಡಂಕಾಪು ಇನ್ಫೆಂಟ್ ಜೀಸಸ್ ಚಚರ್್ ಧರ್ಮಗುರು ಮ್ಯಾಕ್ಸಿಂ ನೊರೊನ್ಹಾ, ಅರ್ಚಕ ಲೋಕೇಶ್ ಶಾಂತಿ ಇವರು ಅಂಚೆ ಕಾರ್ಡ್ ನಲ್ಲಿ ಸ್ವತಃ ಕೈಬರಹದಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದು ಸಹಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ, ಕಾರ್ಯದರ್ಶಿ ರಾಮಚಂದ್ರ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯ, ಬಿ.ಎಂ. ಪ್ರಭಾಕರ ದೈವಗುಡ್ಡೆ, ರಾಜ ಚಂಡ್ತಿಮಾರ್, ಪಿ.ಎ.ರಹೀಂ, ಕೆ.ಎಚ್.ಅಬೂಬಕ್ಕರ್, ಇಬ್ರಾಹಿಂ ಕೈಲಾರ್, ಐಯೂಬ್ ಜಿ. ಕೆ. ಗೂಡಿನಬಳಿ, ಶರೀಫ್ ಪರ್ಲಿಯ, ಹರೀಶ್ ಪೆರಾಜೆ, ಪುತ್ತ ಪರ್ಲಿಯ ಮತ್ತಿತರರು ಪಾಲ್ಗೊಂಡಿದ್ದರು.
