ಮೂಡುಬಿದರೆ: ಏಷ್ಯಾದಲ್ಲಿ ಶಕ್ತಿಯುತ ಆರ್ಥಿಕತೆಯಾಗಿರುವ ಚೈನಾ ಮತ್ತು ಭಾರತ ಈ ನಿಟ್ಟಿನಲ್ಲಿ ಸ್ಪರ್ಧಿಗಳಾಗಿದ್ದು ನಮ್ಮಲ್ಲಿರುವ ಯುವ ಜನ ಸಂಪನ್ಮೂಲ ನಮಗೆ ಬೋನಸ್ ಆಗಿದೆ. ಜನಸಂಖ್ಯೆ ನಮ್ಮ ಬಂಡವಾಳವಾಗಿ ಅದು ಬೌದ್ಧಿಕ, ತಾಂತ್ರಿಕ ಬಂಡವಾಳವಾಗಿ ಆರ್ಥಿಕಆಸ್ತಿಯಾಗಿ ಪರಿವರ್ತನೆಯಾಗಬೇಕು ಎಂದು ಮೈಸೂರು ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ಸೈಯದ್ ಅಖಿಲ್ ಅಹಮದ್ ಹೇಳಿದರು. ಅವರು ಮೂಡುಬಿದರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಅ25ರಿಂದ 31ರವರೆಗೆ ನಡೆಯಲಿರುವ ಇನ್ಸ್ಪೈರ್ ಇಂಟರ್ನ್ಶಿಪ್ 2015 ರಾಜ್ಯಮಟ್ಟದ ಮೂಲ ವಿಜ್ಞಾನ ಅಧ್ಯಯನ ಪ್ರೇರಣಾ ಶಿಬಿರವನ್ನು ಭಾನುವಾರ ಸಂಜೆಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜ್ಞಾನದಿಂದ ಸಂಪನ್ಮೂಲದ ಮೌಲ್ಯ ಹೆಚ್ಚಾಗುತ್ತದೆ. ಮೂಲವಿಜ್ಞಾನದ ಪರಿಣತಿಇದ್ದಾಗ ನಮ್ಮ ತಳಪಾಯ ಭಧ್ರವಾಗಿರುತ್ತದೆ. ಎಂಜಿನಿಯರಿಂಗ್ ಶಿಕ್ಷಣದಲ್ಲೂ ಮೂಲ ವಿಜ್ಞಾನಕ್ಕೆ ಮಹತ್ವ ನೀಡಬೇಕು ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ರಾಜ್ಯ ಯುವಸಬಲೀಕರಣ ಖಾತೆ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ ವಿಜ್ಞಾನದ ಮೂಲಕ ರಾಷ್ಟ್ರ ನಿರ್ಮಾಣವಾಗಬೇಕು. ಯುವಶಕ್ತಿಯ ಆಸಕ್ತಿ ರಾಷ್ಟ್ರದ ಆಸ್ತಿಯಾಗಿ ಪರಿವರ್ತನೆಯಾಗಬೇಕು ಎಂದ ಅವರು ವಿಜ್ಞಾನವನ್ನು ವಿದ್ಯಾರ್ಥಿಗಳು ಸವಾಲಾಗಿ ಸ್ವೀಕರಿಸಿ ಜ್ಞಾನವರ್ಧನೆಗೆ ಮುಂದಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಚಂದ್ರಶೇಖರ ದೀಕ್ಷಿತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ರಮೇಶ ಭಟ್ ಉಪಸ್ಥಿತರಿದ್ದರು.
ಆಶಾ ಶ್ಯಾಲೆಟ್ ಡಿಸೊಜಾ ವಂದಿಸಿದರು. ನಳಿನಿ ಕಾರ್ಯಕ್ರಮ ನಿರೂಪಿಸಿದರು.
