ಬಂಟ್ವಾಳ; ರಾಷ್ಟ್ರೀಯ ಹೆದ್ದಾರಿ 75ರ ಪಡೀಲು ರೈಲ್ವೇ ಮೇಲ್ಸೇತುವೆಯ ಸ್ಥಳದಲ್ಲಿ ರಸ್ತೆ ಹದಗೆಟ್ಟು ಪ್ರತಿನಿತ್ಯ ಟ್ರಾಫಿಕ್ ಜಾಮ್ ನಿಂದಾಗಿ ಪ್ರಯಾಣಿಕರು ಹೈರಾಣಾಗುತ್ತಿದ್ದರೆ, ಇತ್ತ ಬಿ.ಸಿ.ರೋಡಿನಲ್ಲೂ ಹೆದ್ದಾರಿಯಲ್ಲಿ ಕೆರೆಯಾಕಾರದ ಹೊಂಡಗಳು ಕಾಣಿಸಿಕೊಂಡಿದ್ದು ಅಪಾಯವನ್ನು ಆಹ್ವಾನಿಸುವುದರ ಜೊತೆಗೆ ಮತ್ತೊಮ್ಮೆ ಟ್ರಾಫಿಕ್ ಜಾಮ್ ನ ಭೀತಿ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ 75 ರ ಪಡೀಲು, ಬಿ.ಸಿ.ರೋಡು ನಿಂದ ಮಾಣಿಯವರೆಗೆ ಅಲ್ಲಲ್ಲಿ ಬೃಹದಾಕಾರದ ಹೊಂಡಗಳು ಬಾಯ್ಬಿಟ್ಟಿದ್ದು, ರಸ್ತೆ ಯಲಿ ಸಂಚರಿಸಲು ವಾಹನ ಸವಾರರು ಭೀತಿಪಡುವಂತಾಗಿದೆ. ಈ ನಡುವೆ ಬಿ.ಸಿ.ರೋಡಿನ ಮುಖ್ಯರಸ್ತೆಯಲ್ಲಿನ ಬೃಹತ್ ಗಾತ್ರದ ಹೊಂಡಗಳಲ್ಲಿ ಗಿಡನೆಡುವ ಮೂಲಕ ಸ್ಥಳೀರು ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯದ ವಿರುದ್ದ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸರ್ವೆಸ್ ರಸ್ತೆಯಲ್ಲಿ ವಾಹನ ಹಾಗೂ ಜನಸಂಚಾರಕ್ಕೆ ಸಾಧ್ಯವಾಗದ ರೀತಿಯಲ್ಲಿ ಹೊಂಡಗಳು ಬಿದ್ದಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಳಿಕ ಎಚ್ಚೆತ್ತ ರಾಹೆ.ಪ್ರಾ ಇಲಾಖೆ ಡಾಮಾರಿನ ತೇಪೆ ಕಾರ್ಯ ನಡೆಸಿತ್ತು. ಆಧರೆ ಇದೇ ರಸ್ತೆಯ ಇನ್ನೊಂದು ತುದಿಯಲ್ಲಿ ಹೊಂಡಗುಂಡಿಗಳು ಈಗಲೂ ಯಥಾ ಸ್ಥಿತಿಯಲ್ಲಿದ್ದರೂ ಇಲಾಖಾ ಅಧಿಕಾರಿಗಳು ಮಾತ್ರ ಈ ಬಗ್ಗೆಗಮನ ಹರಿಸಿಲ್ಲ.
ಬಿ.ಸಿ.ರೋಡಿನ ಮಾಣಿ ವರೆಗೆ ಅಲ್ಲಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಹೊಂಡಗಳು ಬಾಯ್ದೆರೆದಿದ್ದು, ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ, ದಾಸಕೋಡಿ ಹಾಗೂ ಸೂರಿಕುಮೇರಿನಲ್ಲಿನ ಬೃಹತ್ ಹೊಂಡಗಳು ಮರಣಗುಂಡಿಗಳಂತೆ ಗೋಚರಿಸುತ್ತಿದೆ. ಪ್ರಾಣ ಹಾನಿಯಾಗುವ ಮುನ್ನವೇ ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ
