ಮೂಡುಬಿದರೆ: ಇರುವೈಲು ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ, ಹೊಸಬೆಟ್ಟು ಸಹಕಾರಿ ಸಂಘದ ಅಧೀನದಲ್ಲಿರುವ 4 ಸ್ವಸಹಾಯ ಸಂಘಗಳ ಸದಸ್ಯರು ಸಾಲ ಪಡೆಯದಿದ್ದರೂ, ಬ್ಯಾಂಕ್ ದಾಖಲೆಗಳಲ್ಲಿ ಸಾಲ ಪಡೆದಿದ್ದಾರೆ ಎಂದು ದಾಖಲಾಗಿರುವುರಿಂದ ಸಂತ್ರಸ್ತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಇರುವೈಲಿನ ಯುವಕ ಮಂಡಲದಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ ತಮಗಾದ ವಂಚನೆಯ ಕುರಿತು ವಿವರ ನೀಡಿದ್ದಾರೆ.


ಹೋರಾಟ ಎಚ್ಚರಿಕೆ:
5 ವರ್ಷಗಳ ಹಿಂದೆ ಇರುವೈಲಿನಲ್ಲಿ ಪ್ರಾರಂಭಗೊಂಡಿರುವ 4 ಸ್ವಸಹಾಯ ಗುಂಪುಗಳಾದ ಶ್ರೀನಿಧಿ, ಅಂಬಿಕಾ, ಸಾಯಿದುರ್ಗಾ ಮತ್ತು ಭ್ರಾಮರಾಂಭ ಎಂಬ ನಾಲ್ಕು ಸ್ವ-ಸಹಾಯ ಗುಂಪಿನಲ್ಲಿ ಈ ರೀತಿಯ ಸಾಲದ ವ್ಯವಹಾರದಲ್ಲಿ ಗೋಲ್ಮಾಲ್ ನಡೆದಿದ್ದು, ತಮ್ಮ ಗಮನಕ್ಕೆ ಬಾರದೆ ತಮ್ಮ ಮೇಲೆ ಬ್ಯಾಂಕಿನಲ್ಲಿ ಸಾಲ ಪಾಸ್ ಆಗಿರುವುದರ ಬಗ್ಗೆ ಸದಸ್ಯರು ಇದೀಗ ಕಂಗೆಟ್ಟಿದ್ದು ನ್ಯಾಯ ಸಿಗದಿದ್ದರೆ ಹೊಸಬೆಟ್ಟು ಸಹಕಾರಿ ಸಂಘದ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಪೋರ್ಜರಿ ಸಹಿಗಳೊಂದಿಗೆ ವಂಚನೆ:
ಅಂಬಿಕಾ ಗುಂಪಿನ ರಂಜಿತಾ ಎಂಬಾಕೆ ಮದುವೆಯಾಗಿ ಪತಿ ಮನೆಗೆ ಹೋದ ಐದು ತಿಂಗಳ ನಂತರ ಆಕೆ ಬ್ಯಾಂಕ್ನಲ್ಲಿ ರೂ 95 ಸಾವಿರ ಸಾಲ ಪಡಕೊಂಡಿದ್ದಾರೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ. ಭ್ರಮರಾಂಭದ ಸಾಯಿದುರ್ಗಾ ಸಂದೀಪ್ಗೆ ರೂ 30 ಸಾವಿರ, ಉಗ್ಗಪ್ಪ ದಂಪತಿಗೆ ರೂ 1ಲಕ್ಷ, ಪೂರ್ಣಿಮಾ 40 ಸಾವಿರ ಇದೇ ಗುಂಪಿನ ಯಮುನಾ ರೂ 30 ಸಾವಿರ ಪಡೆದ ಸಾಲದ ಮೊತ್ತ ಅಸಲು ಬಡ್ಡಿ ಸೇರಿ ರೂ 65 ಸಾವಿರಕ್ಕೇರಿದೆ. ಹೀಗೆ ಹೊಸಬೆಟ್ಟು ಬ್ಯಾಂಕ್ನಲ್ಲಿ ವಿವಿಧ ಗುಂಪಿನ ಸದಸ್ಯರನ್ನು ಸಾಲಗಾರರ ಪಟ್ಟಿಯಲ್ಲಿ ತೋರಿಸಿ ಅವರಿಗೆ ನೋಟಿಸ್ ನೀಡಿ ಬೆಚ್ಚಿಬೀಳಿಸಿದೆ. ಹಲವು ಸದಸ್ಯರ ಹೆಸರುಗಳಲ್ಲಿ ಒಟ್ಟು 12 ಲಕ್ಷದ ವರೆಗೆ ಬ್ಯಾಂಕಿನಿಂದಲೇ ನೇರ ಸಾಲವನ್ನು ತೆಗೆಯಲಾಗಿದ್ದು ಗುಂಪಿನ ಪ್ರೇರಕಿ ಶಕೀಲಾ ಎಂಬವರು ಸದಸ್ಯರ ಸಹಿಗಳನ್ನು ಪೋರ್ಜರಿಯಾಗಿ ಹಾಕಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಅವ್ಯವಹಾರದಲ್ಲಿ ಪ್ರೇರಕಿ, ಬ್ಯಾಂಕಿನ ಹಿಂದಿನ ಮೆನೇಜರ್ ಮತ್ತು ಅಧ್ಯಕ್ಷರ ಕೈವಾಡವಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಇರುವೈಲ್ ಪಂಚಾಯಿತಿ ಸದಸ್ಯ ವಲೇರಿಯನ್ ಕುಟಿನ್ಹ, ಭರತ್ ಶೆಟ್ಟಿ, ವಿಲ್ಫ್ರೇಡ್ ಮೆಂಡೋನ್ಸಾ, ಪ್ರಸಾದ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
