ಮೂಡುಬಿದಿರೆ: ಕಡಂದಲೆಯಲ್ಲಿ ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಕೇರಳ ಮೂಲದ ಪೆÇೀಬ್ಸನ್ಸ್ ರಾಕ್ ಮೈನ್ಸ್ನ ಪರವಾನಿಗೆಯನ್ನು ದ.ಕ ಜಿಲ್ಲಾಧಿಕಾರಿಯವರು ರದ್ದುಪಡಿಸುವ ಮೂಲಕ ಎರಡು ವರ್ಷಗಳ ಗ್ರಾಮಸ್ಥರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಕೇರಳ ಮೂಲದ ಅಬ್ರಹಾಂ ಜಾಕೋಬ್ ಎಂಬವರು ಸುಮಾರು 20 ವರ್ಷಗಳ ಹಿಂದೆ ಕಡಂದಲೆಯಲ್ಲಿ ಬೃಹತ್ ಕಪ್ಪು ಕಲ್ಲುಗಣಿಕಾರಿಕೆ ಉದ್ಯಮ ಆರಂಭಿಸಿದ್ದರು. 6 ಎಕ್ರೆ ಖಾಸಗಿ ಜಮೀನನ್ನು ಕ್ರಯಕ್ಕೆ ಪಡೆದು ನಂತರ ಸುತ್ತಮುತ್ತಲಿನ ಸುಮಾರು 20 ಎಕ್ರೆ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆನ್ನಲಾಗಿದೆ. ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗಲು ಶುರುವಾದಾಗ ಗ್ರಾಮಸ್ಥರು 2013ರಂದು ಹೋರಾಟಕ್ಕಿಳಿದರು. ಅದೇ ವರ್ಷ ಸ್ಥಳಿಯರಾದ ಕೆ.ಪಿ ಸಂತೋಷ್ ಶೆಟ್ಟಿ ಮತ್ತು ಚಂದ್ರಶೇಖರ ದೇವಾಡಿಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ 13 ಆರೋಪಗಳಿರುವ ದೂರನ್ನು ನೀಡಿ ಕ್ರಷರ್ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.
ಮೈನ್ಸ್ ಕಂಪೆನಿ ಕಡಂದಲೆಯಲ್ಲಿ 0.95 ಎಕ್ರೆ ಜಾಗವನ್ನು ಗಣಿಗಾರಿಕೆಗೆಂದು ಪರವಾನಿಗೆ ಪಡಕೊಂಡಿದ್ದು ಅಷ್ಟು ಪ್ರದೇಶದಲ್ಲಿ ಗಣಿಗಾರಿಕೆ ಮುಗಿದರೂ ಸುತ್ತಮುತ್ತಲಿನ ಕಂದಾಯ ಮತ್ತು ಅರಣ್ಯ ಭೂಮಿ ಸೇರಿದಂತೆ ಸುಮಾರು 20 ಎಕ್ರೆ ಸರಕಾರಿ ಜಾಗ ಅತಿಕ್ರಮಿಸಿಕೊಂಡು ಅಕ್ರಮವಾಗಿ ಗಣಿಗಾರಿಕೆ ಮುಂದುವರಿಸಿರುವುದು, ಜಲ್ಲಿಪುಡಿ ಹರಿದು ಹಳ್ಳ, ಕೆರೆ ಮುಚ್ಚಿಹೋಗಿದ್ದು ಹತ್ತಿರದ ಶಾಂಭವಿಯ ಕವಲು ನದಿಗೂ ತೊಂದರೆ ಆಗಿರುವುದು, ಭಾರಿ ಗಾತ್ರದ ಸ್ಫೋಟಕದಿಂದ ಹೊರಬಂದ ಪ್ರಕೃತಿದತ್ತ ಸ್ಪಟಿಕ ನೀರನ್ನು ಪಂಪ್ ಮೂಲಕ ಬಂಜರು ಪ್ರದೇಶಕ್ಕೆ ಹರಿಸಿ ಹಾಳು ಮಾಡಿರುವುದು, ಬಫರ್ ಭೂಮಿ ನಾಶ, ಕಡಿದಾದ ಬೆಟ್ಟವನ್ನು ಜೆಸಿಬಿ ಮೂಲಕ ಅಗೆದು ಅಕ್ರಮವಾಗಿ ರಸ್ತೆ ನಿರ್ಮಿಸಿರುವುದು, ಭಾರಿ ಸ್ಫೋಟಕಗಳಿಂದ ಶಬ್ದ ಮಾಲಿನ್ಯ, ಪರಿಸರದ ಮನೆಗಳ ಗೋಡೆಗಳು ಬಿರುಕುಬಿಟ್ಟು ಜನರಲ್ಲಿ ನಿತ್ಯ ಭಯದ ವಾತಾವರಣ, ಪ್ರಕೃತಿ ನಾಶ ಮತ್ತಿತರರ ಪ್ರಮುಖ ಸಮಸ್ಯೆಗಳ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಏತನ್ಮಧ್ಯೆ ಸ್ಥಳಿಯರಾದ ಕೆ.ಪಿ ಸಂತೋಷ್ ಶೆಟ್ಟಿ, ಚಂದ್ರಶೇಖರ ದೇವಾಡಿಗ, ಸ್ಕಂದ ಪ್ರಸಾದ್ ಭಟ್, ಲೀಲಾಧರ ಪೂಜಾರಿ, ಹರೀಶ್ ಅಮೀನ್ ಮತ್ತಿತರರನ್ನೊಳಗೊಂಡ ಗ್ರಾಮಸ್ಥರ ತಂಡ ಕ್ರಷರ್ ವಿರುದ್ಧ ಕಾನೂನು ರೀತ್ಯಾ ಹೋರಾಟವನ್ನು ಮುಂದುವರಿಸಿತ್ತು. ಕೇಮಾರು ಮಠದ ಈಶವಿಠಲದಾಸ್ ಸ್ವಾಮೀಜಿ ಕೂಡ ಹೋರಾಟಗಾರರೊಂದಿಗೆ ಕೈಜೋಡಿಸಿ ತನ್ನ ಬೆಂಬಲ ನೀಡಿದರು.
ಕ್ರಷರ್ ವಿರುದ್ಧ ಗ್ರಾಮಸ್ಥರ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಮುಖ್ಯಮಂತ್ರಿ ಅವರು ಸರಕಾರದ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಆದೇಶಿಸಿದ್ದರು. ಈ ಆದೇಶದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ಇವರು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ 2013ರಂದು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಕಂಪೆನಿ ಕಾನೂನು ಬಾಹಿರ ಗಣಿಗಾರಿಕೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದರು.
ಆಗಿನ ಅಪರ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಹಾಗೂ ಮಂಗಳೂರು ತಹಶಿಲ್ದಾರ್ ಮೋಹನ್ರಾವ್ ಗಣಿಗಾರಿಕೆಯ ಅಕ್ರಮಗಳ ಬಗ್ಗೆ ನೀಡಿದ ತನಿಖಾ ವರದಿಯ ಆಧಾರದಲ್ಲಿ ದ.ಕ. ಜಿಲ್ಲಾಧಿಕಾರಿ ಈಚೆಗೆ ಪೆÇೀಬ್ಸನ್ಸ್ ಮೈನ್ಸ್ ನ ಪರವಾನಿಗೆಯನ್ನು ರದ್ದುಪಡಿಸಿ ಆದೇಶ ನೀಡಿದರು.
ಸುರಕ್ಷಾ ಕ್ರಮಕ್ಕೆ ಆಗ್ರಹ:
ಗಣಿ ಗುತ್ತಿಗೆ ರದ್ದಾದ ಹಿನ್ನೆಲೆಯಲ್ಲಿ ಸರಕಾರದ ನಿಯಮಾನುಸಾರ ಗಣಿಗಾರಿಕಾ ಪ್ರದೇಶದ ಸುತ್ತ ಎತ್ತರದ ಆವರಣ ಗೋಡೆ ನಿರ್ಮಿಸುವುದು, ಗುಂಡಿ, ತಗ್ಗು ಪ್ರದೇಶಗಳನ್ನು ಮುಚ್ಚಿ ಸಮತಟ್ಟುಗೊಳಿಸಿ ಸರಕಾರಕ್ಕೆ ಒಪ್ಪಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿದ ಆದೇಶವನ್ನು ಮೈನ್ಸ್ ಕಂಪೆನಿ ಪಾಲನೆ ಮಾಡದಿದ್ದುದರಿಂದ ಕಂಪೆನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಮತ್ತು ಸ್ಥಳದಲ್ಲಿ ಸುಮಾರು 5 ಕೋಟಿ ಮೌಲ್ಯದ ಜಲ್ಲಿ ಹುಡಿ, ಜಲ್ಲಿ ಕಲ್ಲು ಇನ್ನಿತರ ಸ್ವತ್ತುಗಳು ಉಳಿದಿದ್ದು ಅವುಗಳನ್ನು ಸರಕಾರ ಮುಟ್ಟುಗೋಲು ಹಾಕಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.





