ಬಂಟ್ವಾಳ: ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿ, ಹಿಂದುಗಳನ್ನು ಕೆಣಕುವ ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸುತ್ತಿರುವ ಪ್ರೊ. ಭಗವಾನ್ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಶುಕ್ರವಾರ ಮನವಿ ಸಲ್ಲಿಸಿದೆ.
ಸನಾತನ ಹಿಂದೂ ಧರ್ಮದ ಆಚಾರ ವಿಚಾರ, ಸಿದ್ದಾಂತ, ನಂಬಿಕೆ ಹಾಗೂ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತಿರುವ ಪ್ರೊ. ಕೆ.ಎಸ್.ಭಗವಾನ್ ಹಿಂದೂ ಧರ್ಮದ ಶ್ರೇಷ್ಠ ಗ್ರಂಥ ರಾಮಾಯಣ, ಮಹಾಭಾರತಗಳನ್ನು ನಿಂದಿಸಿಕೊಂಡು ಬರುತ್ತಿದ್ದಾರೆ. ಪ್ರೊ.ಭಗವಾನ್ ತಮ್ಮ ಅಸಂಬದ್ದ ಹೇಳಿಕೆಗಳಿಂದ ಹಿಂದೂ ಬಾಂಧವರ ಮನಸ್ಸಿಗೆ ಆಘಾತ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಪ್ರೊ.ಕೆ.ಎಸ್. ಭಗವಾನ್ ಅವರನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಜರುಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ವಿಭಾಗ ಸಂಚಾಲಕ ರವಿರಾಜ್ ಬಿ.ಸಿ.ರೋಡು, ತಾಲೂಕು ಅಧ್ಯಕ್ಷ ಜಗದೀಶ ನೆತ್ತರಕೆರೆ, ಸಂಚಾಲಕ ಚಂದ್ರ ಅಮ್ಟಾಡಿ, ಕಾರ್ಯದರ್ಶಿ ಪ್ರಶಾಂತ ಕೆಂಪುಗುಡ್ಡೆ, ಜಿಲ್ಲಾ ಸಹಸಂಚಾಲಕ ಬಾಲಕೃಷ್ಣ ಕಲಾಯಿ, ಪ್ರಮುಖರಾದ ರಾಜರಾಮ ಕಡೂರು, ತಿರುಮಲೇಶ ಬೆಳ್ಳೂರು, ಕಿರಣ್ ಮೂರ್ಜೆ, ಸತೀಶ್ಶೆಟ್ಟಿ ಪೊಟ್ಟುಗುಡ್ಡೆ, ಯೋಗೀಶ ತುಂಬೆ, ಪ್ರೇಮನಾಥ ಪೊಳಲಿ, ಮುರಳಿ, ಸಂತೋಷ್ ನೆತ್ತರಕೆರೆ ಹಾಜರಿದ್ದರು.
