ಯೋಗಾಶ್ರಮದ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯ –ಮಾಣಿಲ ಶ್ರೀಗಳು
ಮುಂಬಯಿ: ಮಾರ್ಚ್ 21 ರಿಂದ 29 ರ ವರೆಗೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥ ಸಂಭ್ರಮದಿಂದ ನಡೆದ “ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಮಹಾಯಾಗ ಮತ್ತು ಚತುರ್ವೇದ ಸಂಹಿತಾ ಯಾಗ” ದ “ಕಾರ್ಯಕರ್ತರ ಅಭಿನಂದನೆ ಮತ್ತು ಅವಲೋಕನಾ ಸಭೆ” ಯು ಸೆ.27ರಂದು ಆದಿತ್ಯವಾರ ಯೋಗಾಶ್ರಮದಲ್ಲಿ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಮಾಣಿಲ ಶ್ರೀಧಾಮದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ‘ ಇಲ್ಲಿನ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯವಾದುದು, ಅಪರೂಪದಲ್ಲಿ ಕಾಣಸಿಗುವ ಸಾತ್ವಿಕ ಮನೋಭಾವನೆಯ ಸೇವಾಗುಣದಿಂದ ಕೊಂಡೆವೂರು ತುಂಬಿ ತುಳುಕಿದೆ ಆ ಕಾರಣದಿಂದ ಯಾಗ ಅತ್ಯಂತ ಸಂಭ್ರಮದಿಂದ ನಡೆದಿದೆ. ಎಲ್ಲರಿಗೂ ಸನ್ಮಂಗಲವುಂಟಾಗಲಿ ಎಂದು ಅನುಗ್ರಹಿಸಿದರು.. ‘ಸಮಾಜದ ಹಿತವನ್ನು ನಾವು ನೀವು ಸೇರಿ ಮಾಡಿದ್ದೇವೆ, ಇದು ನಮ್ಮ ಕರ್ತವ್ಯ, ಸಮಾಜದ ಅಸ್ತಿತ್ವಕ್ಕಾಗಿ ನಾವು ಪರಿಶ್ರಮಿಸಲೇಬೇಕು. ಇಲ್ಲವಾದಲ್ಲಿ ನಮ್ಮ ಅಸ್ತಿತ್ವವೇ ಇಲ್ಲವಾಗಬಹುದು. ಸತ್ಕರ್ಮ ಸಾಂಗವಾಗಿ ನಡೆಯುತ್ತಿದೆ. ಇದಕ್ಕೆ ಸಹೃದಯಿಗಳ ಸೇವೆಯೇ ಕಾರಣ ಮಾತೆ ಗಾಯತ್ರೀದೇವಿ ಎಲ್ಲರಿಗೂ ಶುಭವನ್ನು ಕರುಣಿಸಲಿ ಎಂದು ಕೊಂಡೆವೂರಿನ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಹಾರೈಸಿದರು. ‘ ಎಲ್ಲೂ ಕಾಣಲು ಅಸಾಧ್ಯವಾಗುತ್ತಿರುವ ಈ ಕಾಲದಲ್ಲಿ ಇಲ್ಲಿ ಇಂದಿಗೂ ಪ್ರಸ್ತುತವಾಗಿ ದೇವರಿಗೇ ಸಮರ್ಪಿಸಿರುವ ಕಾರ್ಯರ್ಕರ ಪಡೆ ಸೇರಿರುವಂತದ್ದು ನಮಗೆ ಹೃದಯ ತುಂಬಿ ಬಂದಿದೆ. ಶಿಸ್ತು, ಸಮಯಪ್ರಜ್ಞೆ ಹೀಗೆ ಉತ್ತಮ ಉದಾಹರಣೆ ಇಲ್ಲಿ ನಮ್ಮನ್ನು ಇನ್ನಷ್ಟು ಉತ್ತೇಜಿಸಿತ್ತಿದೆ. ಕಟೀಲಿನ ಮಾತೆ ಅನುಗ್ರಹಿಸಲಿ ಎಂದು ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರು ಪ್ರಾರ್ಥಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಮೋನಪ್ಪ ಭಂಡಾರಿ, ಶ್ರೀ ರವೀಂದ್ರ ರೈ ಉಳಿದೊಟ್ಟು, ಶ್ರೀಮತಿ ಸಂಧ್ಯಾ ವಿ. ಶೆಟ್ಟಿ ರವರು ಸಂದರ್ಭೋಚಿತವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಶ್ರೀ ಸ್ವಾಮೀಜಿಯವರುಗಳು ಯಾಗದ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಬೇರೆ ಬೇರೆ ಪಂಗಡಗಳವರನ್ನು ಗುರುತಿಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು. ಶಂಖನಾದ ದೀಪಪ್ರಜ್ವಲನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಸ್ವಾಗತವನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಗೋಪಾಲ ಬಂದ್ಯೋಡು ಮಾಡಿದರು. ಶ್ರೀ ರವೀಂದ್ರ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ಅನೇಕ ಕಡೆಗಳಿಂದ 500 ಕ್ಕೂ ಹೆಚ್ಚು ಕಾರ್ಯಕರ್ತ ಬಂಧು ಭಗಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
