ಬಂಟ್ವಾಳ ತಾ| ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿ.ಸ.ಸಂಘ ಶೇ.12 ಡಿವಿಡೆಂಡ್ ಘೋಷಣೆ
ಬಂಟ್ವಾಳ : ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ 2014-15ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯು ಸೆ.25ರಂದು ಬಿ.ಸಿ.ರೋಡ್ ಎಸ್ಜಿಎಸ್ವೈ ಸಭಾಂಗಣದಲ್ಲಿ ಜರಗಿತು.

ಸಂಘದ ಅಧ್ಯಕ್ಷ ಕೆ.ಎ.ಸತೀಶ್ಚಂದ್ರ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 11,30,98,576 ರೂ. ಒಟ್ಟು ವ್ಯವಹಾರ ನಡೆಸಿದ್ದು 4,30,279 ರೂ. ನಿವ್ವಳ ಲಾಭ ಗಳಿಸಿರುತ್ತದೆ. ಸದಸ್ಯರಿಗೆ ಶೇ. 12ರಂತೆ ಡಿವಿಡೆಂಡ್ ಘೋಷಿಸಲಾಗಿದೆ ಎಂದು ಅವರು ಹೇಳಿದರು. ಸಂಘದಲ್ಲಿ ಒಟ್ಟು 2612 ಸದಸ್ಯರಿದ್ದು ಪಾಲು ಬಂಡವಾಳ 12,34,750 ರೂ. ಇರುತ್ತದೆ. ಪ್ರಸಕ್ತ ವರ್ಷ ಕಳೆದ ಬಾರಿಗಿಂತ 1 ಕೋಟಿ ರೂ. ಅಧಿಕ ಠೇವಣಿ ಸಂಗ್ರಹಿಸಿದ್ದು ಪ್ರಸ್ತುತ 3,29,18,406 ರೂ. ಒಟ್ಟು ಠೇವಣಿ ಇದೆ. 3,09,77,201 ರೂ. ಸಾಲ ನೀಡಿದೆ. ಸಂಘವು ವಾರ್ಷಿಕವಾಗಿ 1,50,893 ರೂ. ಜೇನು ಮತ್ತು ಜೇನು ಕೃಷಿ ಉಪಕರಣಗಳನ್ನು ಮಾರಾಟ ಮಾಡಿ 30,124 ರೂ. ಲಾಭ ಗಳಿಸಿದೆ. ಜೇನು ಕೃಷಿ ಬಗ್ಗೆ ಪ್ರಗತಿಪರ ಜೇನು ಕೃಷಿಕ ಹರೀಶ್ ಕೋಡ್ಲ ಅವರಿಂದ ಮಾಹಿತಿ ನೀಡಲಾಗುತ್ತಿದೆ. ರಬ್ಬರ್ ಕೃಷಿ ಬಗ್ಗೆ ಇಲಾಖಾಧಿಕಾರಿಗಳ ಸಹಕಾರದಲ್ಲಿ ಟ್ಯಾಪಿಂಗ್ ತರಬೇತಿ ನೀಡಲಾಗುತ್ತದೆ. ಸಂಘವು ಪ್ರಸ್ತುತ ಪಾಂಡವರಕಲ್ಲುನಲ್ಲಿ ಶಾಖೆಯನ್ನು ಹೊಂದಿದೆ ಎಂದು ಅವರು ಹೇಳಿದರು.
ಮುಂದಿನ ಅವಧಿಯಲ್ಲಿ 4 ಕೋಟಿ ರೂ. ಸಾಲ ನೀಡುವಿಕೆ, 4 ಕೋಟಿ ರೂ. ಠೇವಣಿ ಸಂಗ್ರಹದ ಗುರಿ ಇರಿಸಲಾಗಿದೆ. ಮತ್ತು ಪ್ರತೀ ಸದಸ್ಯರು ಮನೆಯಲ್ಲಿ ಜೇನು ಸಾಕಣೆ ಮಾಡುವ ಮೂಲಕ ಜೇನಿನ ಉತ್ಪನ್ನಕ್ಕೆ ಪೆÇ್ರೀತ್ಸಾಹ ನೀಡಬೇಕು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ರಾಘವ ಪೂಜಾರಿ ಪುಣಚ, ನಿರ್ದೇಶಕರುಗಳಾದ ಬಿ.ಪದ್ಮಶೇಖರ ಜೈನ್, ಮೋಹನ ಪಿ.ಎಸ್., ಯುವರಾಜ ಆಳ್ವ ಅಜ್ಜಿಬೆಟ್ಟು, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಎ.ಕೆ.ಹ್ಯಾರಿಸ್ ಮಂಚಿ, ಪದ್ಮನಾಭ ನರಿಂಗಾನ, ಕಾಂಚಲಾಕ್ಷಿ ,ಬಿ.ಸಿ.ರೋಡ್ ಕೇಂದ್ರ ಕಛೇರಿ ಮತ್ತು ಪಾಂಡವರಕಲ್ಲು ಶಾಖಾ ಕಛೇರಿ ಸಿಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಗುಣಶೇಖರ ಕೆ. ಅವರು ಸ್ವಾಗತಿಸಿದರು. ಸಂಘದ ಅಧ್ಯಕ್ಷ ಕೆ.ಎ. ಸತೀಶ್ಚಂದ್ರ ಅವರು ವರದಿ ವಾಚಿಸಿದರು. ನಿರ್ದೇಶಕ ಎಂ.ರಾಜೀವ ಶೆಟ್ಟಿ ಎಡ್ತೂರು ವಂದಿಸಿದರು.
ಈ ಸಂದರ್ಭದಲ್ಲಿ ಎಲ್ಪಿಜಿ ಗ್ಯಾಸ್ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
